ಬೆಂಗಳೂರು: ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಜಾರಿಗೊಳಿಸಲು ಬ್ಯಾಂಕುಗಳು ಹೆಚ್ಚು ಹೆಚ್ಚು ಮುಂದೆ ಬರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಉಪ ಗವರ್ನರ್ ಶ್ಯಾಮಲಾ ಗೋಪಿನಾಥ್ ಹೇಳಿದರು.
ಸೋಮವಾರ ಇಲ್ಲಿ ರಾಷ್ಟ್ರೀಕೃತ ಕೆನರಾ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಸೇವೆ `ಕ್ಯಾನ್ಮೊಬೈಲ್~ಗೆ ಚಾಲನೆ ನೀಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕುಗಳು ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲು ಮುಂದೆ ಬರಬೇಕು, ಇದಕ್ಕೆ ಸಂಬಂಧಿಸಿದಂತೆ `ಆರ್ಬಿಐ~ ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಎಂದರು.
`ಕ್ಯಾನ್ ಮೊಬೈಲ್~ ಗ್ರಾಹಕ ಸ್ನೇಹಿಯಾಗಿದ್ದು, ಸುರಕ್ಷಿತ ಮತ್ತು ತ್ವರಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ ಎಂದು ಕೆನರಾ ಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ರಾಮನ್ ಅಭಿಪ್ರಾಯಪಟ್ಟರು. `ಗ್ರಾಹಕರು ಯಾವ ಸಮಯದಲ್ಲಿ, ಎಲ್ಲಿಂದ ಬೇಕಾದರೂ ಬೆರಳ ತುದಿಯಲ್ಲಿ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದು. ಇದು 24*7 ನಂತೆ ಕಾರ್ಯನಿರ್ವಹಿಸುತ್ತದೆ. ಖಾತೆ ಉಳಿತಾಯ ಪರಿಶೀಲನೆ, ನಗದು ವರ್ಗಾವಣೆ ಸೇರಿದಂತೆ ಬಹುವಿಧ ಸೌಲಭ್ಯಗಳನ್ನು ಒಳಗೊಂಡಿದೆ~ ಎಂದರು.
`ಕ್ಯಾನ್ ಮೊಬೈಲ್~ನ ನೊಂದಾಯಿತ ಗ್ರಾಹಕರು ಕೊನೆಯ ಐದು ವಹಿವಾಟಿನ ವಿವರಗಳನ್ನು ಮೊಬೈಲ್ ಮೂಲಕ ಪರಿಶೀಲಿಸಬಹುದು. ಅಂತರ ಬ್ಯಾಂಕ್ ಮೊಬೈಲ್ ಪಾವತಿ (ಐಎಂಪಿಎಸ್) ಸೌಲಭ್ಯದಡಿ `ಜಿಪಿಆರ್ಎಸ್~ ಮತ್ತು `ಜಾವಾ~ ಸೌಲಭ್ಯ ಇರುವ ಮೊಬೈಲ್ಗಳಲ್ಲಿ 50 ಸಾವಿರದವರೆಗೆ ಹಾಗೂ ಉಳಿದ ಹ್ಯಾಂಡ್ಸೆಟ್ಗಳಲ್ಲಿ ರೂ 5 ಸಾವಿರದವರೆಗೆ ನಗದು ವರ್ಗಾವಣೆ ಮಾಡಬಹುದು. ಸದ್ಯ ಬ್ಯಾಂಕ್ ಈ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ ಎಂದರು.
`ಆರ್ಬಿಐ~ ಪ್ರಾದೇಶಿಕ ನಿರ್ದೇಶಕ ಪಿ. ವಿಜಯಭಾಸ್ಕರ್ ಮತ್ತಿತರು ಭಾಗವಹಿಸಿದ್ದರು.