ಬೆಂಗಳೂರು: `ಸದಾ ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದ ತಾವು ಈಗ ಭಾರತ ಪಾಕಿಸ್ತಾನಗಳ ಕ್ರಿಕೆಟ್ ಪಂದ್ಯಕ್ಕೆ ಬೆಂಬಲ ಸೂಚಿಸಲು ಬಿಳಿ ಬಾವುಟವನ್ನು ಪ್ರದರ್ಶಿಸುತ್ತಿದ್ದೇವೆ' ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿಳಿ ಬಾವುಟದ ಪ್ರದರ್ಶನವನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಡಿ.18 ರಂದು ಹಮ್ಮಿಕೊಳ್ಳಲಾಗಿದೆ' ಎಂದರು.
`ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಕ್ರಿಕೆಟ್ ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಹೇಳಿರುವುದು ಸರಿಯಲ್ಲ' ಎಂದು ಖಂಡಿಸಿದರು.
`ಈ ಪಂದ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಕಲೆ, ಕ್ರೀಡೆ ಮತ್ತು ಸಂಸ್ಕೃತಿಯಲ್ಲಿ ಮತ ಭೇದ ಇರಬಾರದು. ಎರಡು ದೇಶಗಳ ನಡುವೆ ಸ್ನೇಹ ಸೌಹಾರ್ದ ಬೆಳೆಯಲು ಈ ಪಂದ್ಯ ಸಹಾಯಕವಾಗಲಿದೆ' ಎಂದರು.