ಚಿತ್ರದುರ್ಗ: ಜುಗುಪ್ಸೆ ಬದುಕಿಗೆ ಮಾರಕ. ಕ್ರೀಡೆ ಮತ್ತಿತರರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸದಾ ಕ್ರಿಯಾಶೀಲವಾಗುವ ಮೂಲಕ ಜುಗುಪ್ಸೆಯನ್ನು ತೊಡೆದು ಹಾಕಬಹುದು ಎಂದು ಶಿವಮೂರ್ತಿ ಮುರುಘಾ ಶರಣರು ಕಿವಿಮಾತು ಹೇಳಿದರು.
ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯಮಟ್ಟದ ಅಂತರಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ನೇತೃತ್ವವಹಿಸಿ ಮಾತನಾಡಿದರು.
ಕ್ರೀಡೆಗೆ ಮಾನಸಿಕ, ದೈಹಿಕ ಕ್ಷಮತೆ ಅತ್ಯಗತ್ಯ. ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳು, ಯುವಕರು ತಮ್ಮ ಶಕ್ತಿಯನ್ನು ಬಳಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ವ್ಯಕ್ತಿ ಅತ್ಯಂತ ಉತ್ಸಾಹಿಯಾಗಿರುತ್ತಾನೆ. ಮಾನವನ ಬದುಕು ಚಟುವಟಿಕೆಗಳ ಕೇಂದ್ರವಾಗಿದ್ದು, ಜಡವಾಗದಂತೆ ಸದಾ ಎಚ್ಚರದಲ್ಲಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು, ಶಿಕ್ಷಕರು ಕೇವಲ ಪಠ್ಯಕ್ಕೆ ಮಾತ್ರ ಮಹತ್ವ ನೀಡಬಾರದು. ದೈಹಿಕ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಬೇಕು. ನಮ್ಮ ವ್ಯಕ್ತಿತ್ವ ಹಾಗೂ ದೈಹಿಕ ಸಾಮರ್ಥ್ಯ ಬೆಳೆಯುವುದು ಶಾರೀರಿಕ ಶ್ರಮ ಹಾಗೂ ಕ್ರೀಡೆಯಿಂದ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಎಂ.ಎಸ್. ರಾಜಕುಮಾರ್, ಸಿಂಡಿಕೇಟ್ ಸದಸ್ಯರಾದ ರಮಾ ನಾಗರಾಜ್, ಪ್ರಾಂಶುಪಾಲ ಡಾ.ಎಂ. ಬಸವರಾಜು ಭಾಗವಹಿಸಿದ್ದರು.