ಮಣಿಪಾಲ: ಆಲ್ರೌಂಡರ್ ಸ್ಟಾಲಿನ್ ಹೂವರ್ ಅವರ ಆಲ್ರೌಂಡ್ ಆಟದ ನೆರವಿನಿಂದ ಬೆಂಗಳೂರು ವಿಶ್ವವಿದ್ಯಾಲಯ ತಂಡವು ಎದುರಾಳಿ ತಮಿಳುನಾಡಿನ ಅಣ್ಣಾಮಲೈ ತಂಡವನ್ನು ಸೋಲಿಸಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಆರಂಭಿಕ ಬೌಲರ್ ಸ್ಟಾಲಿನ್ ಹೂವರ್ ಅಣ್ಣಾಮಲೈ ತಂಡದ 3 ವಿಕೆಟ್ಗಳನ್ನು ಪಡೆದಿದ್ದಲ್ಲದೇ, ಅಜೇಯ 51 ರನ್ ಗಳಿಸುವ ಮೂಲಕ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮಣಿಪಾಲ ವಿ.ವಿ. ಎಂಡ್ಪಾಯಿಂಟ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಂಟಿಂಗ್ ನಡೆಸಿದ ಅಣ್ಣಾಮಲೈ ವಿ.ವಿ ತಂಡದ ಗೆಲುವಿನ ಓಟಕ್ಕೆ ಬೆಂಗಳೂರು ವಿ.ವಿ ತಂಡವು ಕಡಿವಾಣ ಹಾಕಿತು. ಎದುರಾಳಿ ತಂಡವನ್ನು 33.3 ಓವರ್ಗಳಲ್ಲಿ 76 ರನ್ನಿಗೆ ಕಟ್ಟಿಹಾಕುವಲ್ಲಿ ಸ್ಟಾಲಿನ್ (11ಕ್ಕೆ 3) ಅವರಿಗೆ ಬಲಗೈ ವೇಗದ ಬೌಲರ್ ಚೇತನ್ ಕೆ.ವಿ (27ಕ್ಕೆ 3) ಹಾಗೂ ರಾಜ್ ಕುಮಾರ್ (19ಕ್ಕೆ 2) ನೆರವಾದರು. ಬೆಂಗಳೂರು ವಿ.ವಿ ತಂಡವು 24.3 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 77 ರನ್ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ಎರಡನೇ ಕ್ರಮಾಂಕದಲ್ಲಿ ಆಡಲು ಇಳಿದ ಸ್ಟಾಲಿನ್ 60 ಬಾಲ್ಗಳಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳನ್ನೊಳಗೊಂಡ 51 ರನ್ ಬಾರಿಸಿದರು.
ಬೆಂಗಳೂರು ತಂಡವು ಶುಕ್ರವಾರ ನಡೆಯುವ ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಜೈನ್ ವಿ.ವಿ ತಂಡವನ್ನು ಎದುರಿಸಲಿದೆ.
ಮಂಗಳೂರು ವಿ.ವಿ ಹೊರಕ್ಕೆ:
ಮಣಿಪಾಲದ ಎಂಡ್ಪಾಯಿಂಟ್-1 ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಂಗಳೂರು ವಿ.ವಿ ತಂಡವು ಹೈದರಾಬಾದಿನ ಜವಹರಲಾಲ್ ನೆಹರೂ ತಾಂತ್ರಿಕ ವಿ.ವಿ ತಂಡದ ಎದುರು ಆರು ವಿಕೆಟ್ಗಳಿಂದ ಶರಣಾಯಿತು. ಮೊದಲು ಬ್ಯಾಂಟಿಂಗ್ ನಡೆಸಿದ ಮಂಗಳೂರು ವಿ.ವಿ ತಂಡ 43.3 ಓವರ್ಗಳಲ್ಲಿ 111 ರನ್ನಿಗೆ ಆಲೌಟ್ ಆಯಿತು.
ಎದುರಾಳಿ ತಂಡದ ಚೈತನ್ಯ ಕೆ. ಹಾಗೂ ರವಿ ತೇಜ ತಲಾ ಮೂರು ವಿಕೆಟ್ ಪಡೆಯುವ ಮೂಲಕ ಮಂಗಳೂರು ವಿವಿ ತಂಡದ ಸೋಲಿಗೆ ಮುನ್ನುಡಿ ಬರೆದರು. ಗುರಿಯನ್ನು ಬೆನ್ನಟ್ಟಿದ ಜೆಎನ್ಟಿಯು ತಂಡ ರೋಹನ್ ಯಾದವ್ ಅವರ ಅಜೇಯ 35 ರನ್ಗಳ ನೆರವಿನಿಂದ 28.5 ಓವರ್ಗಳಲ್ಲಿ ಗುರಿ ತಲುಪಿತು.
ಬೆಂಗಳೂರು ವಿ.ವಿ ಹಾಗೂ ಜೈನ್ ವಿ.ವಿ ನಡುವಿನ ಕ್ವಾರ್ಟರ್ ಫೈನಲ್ನಲ್ಲಿ ಜಯಗಳಿಸುವ ತಂಡವನ್ನು ಆಂಧ್ರ ವಿ.ವಿ ತಂಡವು ಸೆಮಿಫೈನಲ್ನಲ್ಲಿ ಎದುರಿಸಲಿದೆ.
ಸ್ಕೋರುಗಳು:
ಎಂ.ಐ.ಟಿ ಮೈದಾನ: ಆಂಧ್ರ ವಿ.ವಿ ವಿಶಾಖಪಟ್ಟಣ: 48 ಓವರ್ಗಳಲ್ಲಿ 230ಕ್ಕೆ ಆಲೌಟ್ (ವೆಂಕಟ ಮುರಳಿ 34, ಸತೀಶ್ 33, ಬರಿನಿ 34, ದುರ್ಗಾಪ್ರಸಾದ್ 46; ವಿಕ್ರಂ 29ಕ್ಕೆ4, ಮಹೇಶ್ವರ್ 32ಕ್ಕೆ2). ಶ್ರೀವೆಂಕಟೇಶ್ವರ ವಿ.ವಿ ತಿರುಪತಿ: 41.2 ಓವರ್ಗಳಲ್ಲಿ 150ಕ್ಕೆ ಆಲೌಟ್ (ಮಹೇಶ್ವರ ರೆಡ್ಡಿ 55, ಎಂ.ರೆಹಮತುಲ್ಲಾ 27; ಸುರೇಶ್ 13ಕ್ಕೆ3, ಧರ್ಮೇಂದ್ರ 33ಕ್ಕೆ 3, ಸತ್ಯನಾರಾಯಣ 37ಕ್ಕೆ2).
ಮಣಿಪಾಲ ವಿವಿ ಮೈದಾನ-1: ಮಂಗಳೂರು ವಿ.ವಿ: 43.3 ಓವರ್ಗಳಲ್ಲಿ 111ಕ್ಕೆ ಆಲೌಟ್ (ಆಶ್ರೀನ್ 28, ರವಿತೇಜ 26ಕ್ಕೆ3, ಚೈತನ್ಯ 15ಕ್ಕೆ3; ನರೇಂದರ್ 27ಕ್ಕೆ2, ಅನುರಾಗ್ 21ಕ್ಕೆ2). ಜೆಎನ್ಟಿಯು ಹೈದರಾಬಾದ್: 28.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 114 (ರೋಹನ್ ಯಾದವ್ ಅಜೇಯ 35, ಶ್ರೀಕಾಂತ್ 29).
ಮಣಿಪಾಲ ವಿ.ವಿ ಮೈದಾನ-2: ಅಣ್ಣಾಮಲೈ ವಿ.ವಿ ತಮಿಳುನಾಡು: 33.3 ಓವರ್ಗಳಲ್ಲಿ 76ಕ್ಕೆ ಆಲೌಟ್ (ಸಬೀರ್ ಸಿ. 22; ಸ್ಟಾಲಿನ್ ಹೂವರ್ 11ಕ್ಕೆ 3, ಚೇತನ್ ಕೆ.ವಿ 27ಕ್ಕೆ 3, ರಾಜ್ ಕುಮಾರ್ 19ಕ್ಕೆ 2). ಬೆಂಗಳೂರು ವಿ.ವಿ: 24.3 ಓವರ್ಗಳಲ್ಲಿ 3 ವಿಕೆಟ್ಗೆ 78 (ಸ್ಟಾಲಿನ್ ಹೂವರ್ ಅಜೇಯ 51, ಶಿವ ಕುಮಾರ್ 21ಕ್ಕೆ3).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.