ಭಾಲ್ಕಿ: ತಾಲ್ಲೂಕಿನ ಖಟಕಚಿಂಚೋಳಿಯ ಕೂಡು ರಸ್ತೆ ತೀರಾ ಹದಗೆಟ್ಟಿರುವುದರಿಂದ ಭಾಲ್ಕಿ ಹುಮನಾಬಾದ ಬಸ್ಗಳು ಗ್ರಾಮಕ್ಕೆ ಬರುತ್ತಿಲ್ಲ. ಇದರಿಂದ ಪ್ರತಿನಿತ್ಯವೂ ಶಾಲಾ ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಕೂಡಲೇ ಲೋಕೋಪಯೋಗಿ ಇಲಾಖೆಯವರು ಕ್ರಮ ಕೈಗೊಂಡು ರಸ್ತೆ ರಿಪೇರಿ ಮಾಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರು ಆಗ್ರಹಿಸಿದ್ದಾರೆ.
ಗುರುವಾರ ಎಬಿವಿಪಿ ಮುಖಂಡರು ಮತ್ತು ವಿದ್ಯಾರ್ಥಿಗಳು ಭಾಲ್ಕಿಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ವಾರದೊಳಗೆ ಸೂಕ್ತ ಕ್ರಮ ಜರುಗಿಸದಿದ್ದರೆ ರಸ್ತೆತಡೆ ನಡೆಸುವ ಮೂಲಕ ಉಗ್ರ ಪ್ರತಿಭಟನೆ ನಡೆಸುವುದಾಗಿ ನೂರಾರು ವಿದ್ಯಾರ್ಥಿಗಳು ಸಹಿ ಮಾಡಿರುವ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಎಬಿವಿಪಿ ತಾಲ್ಲೂಕು ಕಾರ್ಯದರ್ಶಿ ರೇವಣಸಿದ್ಧ ಜಾಡರ, ಸತೀಶ ಸಂಗೊಳಗೆ, ಶಿವಕುಮಾರ ಚಿಲಶೆಟ್ಟೆ, ಸಂಜೀವಕುಮಾರ ಬೆಳಕೆರೆ, ಸಿದ್ಧು ಡಾವರಗಾವೆ, ಲೋಕೇಶ ಮೌರೆ, ಸಂಗಮೇಶ ಕುಂಬಾರ, ಸಂಜೀವ ಬಿರಾದಾರ ಮುಂತಾದವರು ಇದ್ದರು.