ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತರಿಯಲ್ಲಿ ಶೇ. 96 ಅವ್ಯವಹಾರ

Last Updated 14 ಜೂನ್ 2011, 10:05 IST
ಅಕ್ಷರ ಗಾತ್ರ

ಬಸವಕಲ್ಯಾಣ: ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಶೇ. 96 ರಷ್ಟು ಅವ್ಯವಹಾರ ನಡೆಯುತ್ತಿದೆ. ಬಡವರಿಗೆ ಸಿಗಬೇಕಾದ ಹಣ ಉಳ್ಳವರ ಜೇಬಿಗೆ ಹೋಗುತಿದ್ದು ಅಂಥ ಲೂಟಿಕೋರರನ್ನು ಜೈಲಿಗೆ ಕಳಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದರು.

ಖಾತರಿ ಯೋಜನೆ ಸಮರ್ಪಕ ಜಾರಿ ಉದ್ದೇಶದಿಂದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಸೋಮವಾರ ಇಲ್ಲಿನ ಅನುಭವ ಮಂಟಪದಲ್ಲಿ ಹಮ್ಮಿ   ಕೊಂಡಿದ್ದ ಮೂರು ದಿನಗಳ ರಾಜ್ಯಮಟ್ಟದ ಶಿಬಿರದಲ್ಲಿ  ಮಾತನಾಡಿದರು.

ಕೂಲಿಕಾರರು ಸಿಗುತ್ತಿಲ್ಲ ಎಂಬ ಪೊಳ್ಳು ನೆಪ ಬೇಡ. ಕೆಲವರು ಕೆಲಸವಿಲ್ಲದೆ ಕುಳಿತರೂ ಕೆಲಸ ಕೊಡಲಾಗುತ್ತಿಲ್ಲ. ಆದ್ದರಿಂದ ಉಪಾಯವಿಲ್ಲದೆ ಬಡ ಮಹಿಳೆಯರು ಮುಂಬೈ, ಹೈದ್ರಾಬಾದಗೆ ಹೋಗಿ ಏಡ್ಸ್, ಮಲೇರಿಯಾದಂಥ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಶ್ರಮಜೀವಿಯಾದವನು ಎಲ್ಲಿದ್ದಾನೋ ಅಲ್ಲೇ ಇರುತ್ತಿದ್ದಾನೆ ಎಂದು ಕಿಡಿ ಕಾರಿದರು.

ನಾವೆಲ್ಲ ಕಾರ್ಮಿಕರನ್ನು ಆದರ್ಶವಾಗಿಟ್ಟು ಅವರ ಕ್ಷೇಮಾಭಿವೃದ್ಧಿಗಾಗಿ ಚಿಂತಿಸಬೇಕಾಗಿದೆ. ಅಣ್ಣಾ ಹಜಾರೆ ಅವರ ಗ್ರಾಮ ರಾಣೆಗಣಸಿದ್ಧಿಯಂತೆ ಇಲ್ಲಿನ ಗ್ರಾಮೀಣ ಭಾಗದಲ್ಲಿ ಸಹ ಜಲಾನಯನ ಅಭಿವೃದ್ಧಿ ಕಾರ್ಯ ನಡೆಯಬೇಕು. ಮೊದಲು ಈ ಯೋಜನೆಯಲ್ಲಿನ ಭ್ರಷ್ಟಾಚಾರ ತಡೆಯಬೇಕು. ಜತೆಗೆ ಗ್ರಾಮೀಣ ಭಾಗದವರ ಬದುಕಲ್ಲಿ ಹೊಸ ಬೆಳಕು ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದರು.

ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ ಮಾತನಾಡಿ, ಅಧಿಕಾರಿಗಳು ಶರಣರ ತತ್ವದಂತೆ ನಡೆದು ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಬಡವರ ಬದುಕನ್ನು ಹಸನುಗೊಳಿಸಬೇಕು ಎಂದರು.

ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಶರಣಪ್ಪ ಮುದಗಲ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಬಸವರಾಜ ಚಿರಡೆ, ನಿತ್ಯಾನಂದಸ್ವಾಮಿ, ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಪುಟ್ಟಮಾದು, ಸಾಹಿತಿಗಳಾದ ಆರ್.ಕೆ.ಹುಡಗಿ, ಪ್ರಭು ಖಾನಾಪುರೆ, ಕಾಶೀನಾಥ ಅಂಬಲಗೆ, ಮೀನಾಕ್ಷಿ ಬಾಳಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಶ್ರೀದೇವಿ ಚಿವಡೆ, ಅಂಬುಬಾಯಿ ಮಾಳಗೆ, ಸಿದ್ಧಪ್ಪ ಮೇತ್ರೆ, ಚಂದ್ರಪ್ಪ ಹೊಸಕೇರಾ, ಮೀನಾ ಬೋರಾಳಕರ್ ಉಪಸ್ಥಿತರಿದ್ದರು. ರಾಜ್ಯದ ಪ್ರತಿ ಜಿಲ್ಲೆಯ ಪ್ರತಿನಿಧಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT