ಖಾನಾಪುರ: ಕೇಂದ್ರ ಪೊಲೀಸ್ ಮೀಸಲು ಪಡೆಯ (ಸಿಆರ್ಪಿಎಫ್) ಸುಸಜ್ಜಿತ ಕಮಾಂಡೋ ತರಬೇತಿ ಕೇಂದ್ರವನ್ನು ಶೀಘ್ರದಲ್ಲೇ ತಾಲ್ಲೂಕಿನ ತೋರಾಳಿ ಗ್ರಾಮದ ಬಳಿ ಪ್ರಾರಂಭಿಸಲಾಗುವುದು ಎಂದು ಸಿಆರ್ಪಿಎಫ್ ಮುಖ್ಯಸ್ಥ ಕೆ.ವಿಜಯಕುಮಾರ ತಿಳಿಸಿದರು.
ಸೋಮವಾರ ತಾಲ್ಲೂಕಿನ ತೋರಾಳಿ ಗ್ರಾಮದ ಬಳಿ ಕೇಂದ್ರ ಸರ್ಕಾರ ತೆರೆಯಲು ಉದ್ದೇಶಿಸಿರುವ ನೂತನ ಸಿಆರ್ಪಿಎಫ್ ತರಬೇತಿ ಕೇಂದ್ರದ ನಿಯೋಜಿತ ಸ್ಥಳ ಪರಿಶೀಲನೆ ನಡೆಸಿದ ನಂತರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ನಮ್ಮ ದೇಶದ ಸಿಆರ್ಪಿಎಫ್ ಜಗತ್ತಿನಲ್ಲೇ ದೊಡ್ಡ ಆಂತರಿಕ ಭದ್ರತೆಯನ್ನು ಕಾಪಾಡುವ ಸಂಸ್ಥೆಯಾಗಿದೆ.
ದೇಶದಾದ್ಯಂತ ಇದರ ತರಬೇತಿ ಘಟಕಗಳಿದ್ದು, ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ತರಬೇತಿ ಘಟಕವನ್ನು ಆಧುನಿಕ ಹಾಗೂ ಸುಸಜ್ಜಿತ ರೀತಿಯಲ್ಲಿ ತೋರಾಳಿ ಗ್ರಾಮದ ಬಳಿ ತೆರೆಯಲು ಉದ್ದೇಶಿಸಲಾಗಿದೆ. ಇಲ್ಲಿ ರಾಷ್ಟ್ರೀಯ ಸ್ಪೇಷಲ್ ಕಮಾಂಡೋ ತರಬೇತಿ ಕೇಂದ್ರದ ಪ್ರಾರಂಭದಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಉದ್ಭವಿಸಬಹುದಾದ ತುರ್ತು ಪರಿಸ್ಥಿತಿ, ಗಲಭೆ, ಉಗ್ರರ ದಾಳಿ ಮುಂತಾದ ಘಟನೆಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಲಿದೆ~ ಎಂದರು.
`ದೇಶದ ಆಂತರಿಕ ಗಲಭೆಯನ್ನು ನಿಯಂತ್ರಿಸುವಲ್ಲಿ ಸಿಆರ್ಪಿಎಫ್ ತಂಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಕ್ಷಿಣ ಭಾರತದಲ್ಲಿ ಇದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವುದರಿಂದ ಈ ಭಾಗದ ಸ್ಥಳೀಯ ಜನರಿಗೂ ಉದ್ಯೋಗ ದೊರಕಿದಂತಾಗುವುದು.
ದುರ್ಗಮ ಪ್ರದೇಶದಲ್ಲಿರುವ ಈ ಭಾಗವೂ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುವುದರ ಜೊತೆಗೆ ಮುಂದಿನ ದಿನಗಳಲ್ಲಿ ಈ ಗ್ರಾಮ ಪ್ರಸಿದ್ಧಿ ಪಡೆಯುವುದು. ಎನ್ಎಸ್ಜಿ ಮಾದರಿಯಲ್ಲಿ ಸುಸಜ್ಜಿತ ಹಾಗೂ ಆಧುನಿಕ ರೀತಿಯ ತರಬೇತಿಯನ್ನು ಇಲ್ಲಿ ಆಗಮಿಸುವ ಪ್ರಶಿಕ್ಷಣಾರ್ಥಿಗಳಿಗೆ ನೀಡಲಾಗುವುದು.
ಅರಣ್ಯ ಪ್ರದೇಶದಕ್ಕೆ ಹೊಂದಿಕೊಂಡಂತಿರುವ ತೋರಾಳಿ ಗ್ರಾಮದ ಬಳಿಯ 408 ಎಕರೆಯಷ್ಟು ವಿಶಾಲವಾದ ಸ್ಥಳ ತರಬೇತಿ ಕೇಂದ್ರ ಸ್ಥಾಪನೆಗೆ ಸೂಕ್ತವಾಗಿದ್ದು, ಶೀಘ್ರದಲ್ಲೇ ಈ ತರಬೇತಿ ಕೇಂದ್ರಕ್ಕೆ ಸೂಕ್ತ ನಾಮಕರಣ ಮಾಡಲಾಗುವುದು~ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಮೀಸಲು ಪಡೆಯ ಎಡಿಜಿ ಪಿ.ಎಂ ನಾಯರ್, ಡಿಐಜಿ ಕೆ.ಆರ್ಕಿಸ್, ಕಮಾಂಡೆಂಟ್ ಸುನೀಲ ತೋರ್ಪ, ಡೆಪ್ಯುಟಿ ಕಮಾಂಡೆಂಟ್ ರಾಜು ನಾಯ್ಕ, ಉತ್ತರ ವಲಯ ಐಜಿಪಿ ಎನ್.ಆರ್.ಕೆ ರೆಡ್ಡಿ, ಎಸ್ಪಿ ಸಂದೀಪ ಪಾಟೀಲ, ಜಿಲ್ಲಾಧಿಕಾರಿ ಅನ್ಬುಕುಮಾರ, ಡಿಎಸ್ಪಿ ಡಾ.ಅಶ್ವಿನಿ, ಎಸಿ ವಿಜಯಮಹಾಂತೇಶ, ತಹಶೀಲ್ದಾರ ಶಿವಾನಂದ ಭಜಂತ್ರಿ, ಸಿಪಿಐ ವೀರೇಂದ್ರಕುಮಾರ, ಪಿಎಸ್ಐ ಧೀರಜ ಸಿಂಧೆ, ಸಿಆರ್ಪಿಎಫ್ ಇನ್ಸಪೆಕ್ಷರ್ ಮಾರುತಿ ಬಾಳೇಕುಂದ್ರಿಕರ, ಕಂದಾಯ ನಿರೀಕ್ಷಕ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು.
`ಆರ್ಥಿಕ ಸ್ವಾವಲಂಬಿಗಳಾಗಿ~
ಬೆಳಗಾವಿ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಜಮುನಾಳ ಹಾಗೂ ಖನಗಾಂವ ಗ್ರಾಮದಲ್ಲಿ ಇತ್ತೀಚೆಗೆ ಆದಿವಾಸಿ ಜನಾಂಗದ ಅಭಿವೃದ್ಧಿ ಯೋಜನೆಯಡಿಯಲ್ಲಿ ಭೂರಹಿತ ಕೂಲಿ ಕಾರ್ಮಿಕ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ `ಆಹಾರ ಮತ್ತು ಪೋಷಣೆ~ ವಿಷಯದ ಕುರಿತು ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಬರ್ಡ್ಸ್ ಸಂಸ್ಥೆಯ ಕಾರ್ಯನಿರ್ವಾಹಾಕ ನಿರ್ದೇಶಕ ಆರ್.ಎಂ.ಪಾಟೀಲ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.