ನವದೆಹಲಿ (ಪಿಟಿಐ): ಉಚಿತ ಜಮೀನು ನೀಡುವುದೂ ಸೇರಿದಂತೆ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಹೆಚ್ಚಿನ ಬೆಂಬಲ ನೀಡಬೇಕು ಎಂದು ಯೋಜನಾ ಆಯೋಗದ ತಂಡವೊಂದು ಬೇಡಿಕೆ ಮುಂದಿಟ್ಟರೆ, ಇನ್ನೊಂದೆಡೆ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ವಿಶ್ವವಿದ್ಯಾಲಯಗಳ ಶುಲ್ಕ ಹೆಚ್ಚಳ ಬೇಡಿಕೆಗೆ ದನಿಗೂಡಿಸಿದ್ದಾರೆ.
ಉನ್ನತ ಶಿಕ್ಷಣದಲ್ಲಿ ಕಾರ್ಪೊರೇಟ್ ವಲಯದ ಸಹಭಾಗಿತ್ವ ಕುರಿತು ಇನ್ಫೋಸಿಸ್ ಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ನೇತೃತ್ವದ ಸಮಿತಿಯು ಮಂಗಳವಾರ ಅಹ್ಲುವಾಲಿಯಾ ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ.
`ವಿಶ್ವವಿದ್ಯಾಲಯಗಳಿಗೆ ಅನುದಾನ ನಿಲ್ಲಿಸಿ, ಅದರ ಬದಲು ವಿದ್ಯಾರ್ಥಿಗಳಿಗೆ ಅನುದಾನ ನೀಡಿ. ಆಗ ಅವರು ವಿವಿಗಳಿಗೆ ಹೋಗುತ್ತಾರೆ~ ಎಂದು ಅಹ್ಲುವಾಲಿಯಾ ಹೇಳಿದರು.ಸಿಬಲ್ ಟೀಕೆ: ವಿದ್ಯಾರ್ಥಿ ಶಿಕ್ಷಣ ಸಾಲಕ್ಕೆ ಮರು ಬಂಡವಾಳ ಹೂಡಿಕೆಗಾಗಿ ಶೈಕ್ಷಣಿಕ ಹಣಕಾಸು ನಿಗಮ ಸ್ಥಾಪಿಸುವ ಪ್ರಸ್ತಾವ ವಿರೋಧಿಸಿರುವ ಯೋಜನಾ ಆಯೋಗದ ವಿರುದ್ಧ ಮಾನವ ಸಂಪ್ಮಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಕಿಡಿಕಾರಿದ್ದಾರೆ. ಇದು ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರೋಧವಾದ ಕ್ರಮ ಎಂದು ಅವರು ಟೀಕಿಸಿದ್ದಾರೆ.
ಮಸೂದೆ ಮಂಡನೆ: ಅಂಗವಿಕಲ ಮಕ್ಕಳು ಮನೆಯಲ್ಲಿದ್ದುಕೊಂಡೇ ಶಿಕ್ಷಣ ಪಡೆಯಲು ಅವಕಾಶ ನೀಡುವ `ಮುಕ್ತ ಹಾಗೂ ಕಡ್ಡಾಯ ಶಿಕ್ಷಣ (ತಿದ್ದುಪಡಿ) ಮಸೂದೆ~ಯನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.