ಗಂಗಾವತಿ: ಎಳ್ಳಮಾವಾಸ್ಯೆಯ ಅಂಗವಾಗಿ ಗಂಗಾವತಿಯ ಗ್ರಾಮ ದೇವತೆ ದುರ್ಗಾದೇವಿಯ ಉತ್ಸವ ನಗರದಲ್ಲಿ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ಉತ್ಸವದ ಅಂಗವಾಗಿ ಇಲ್ಲಿನ ಕಲ್ಮಠದಿಂದ ಬಸವಣ್ಣ ವೃತ್ತ, ಗಾಂಧಿ ವೃತ್ತದ ಮೂಲಕ ದುರ್ಗಮ್ಮ ದೇವಸ್ಥಾನದವರೆಗೆ ದೇವಿಯ ಭಾವಚಿತ್ರದ ಮೆರವಣಿಗೆ ನಡೆಯಿತು.
50 ವರ್ಷದ ಬಳಿಕ ಗ್ರಾಮ ದೇವತೆಯ ಜಾತ್ರೆ 2011ರಲ್ಲಿ ನಡೆದಿತ್ತು. ಇದೀಗ ಎರಡನೇ ವರ್ಷದ ದುರ್ಗಮ್ಮ ದೇವಿಯ ಎಳ್ಳಮಾವಾಸ್ಯೆ ಉತ್ಸವ ನಡೆಯಿತು. ಜಾತ್ರೆಯ ಅಂಗವಾಗಿ ನಡೆದ ಮೆರವಣಿಗೆಗೆ ಡೊಳ್ಳು ಕುಣಿತ, ಭಜನೆ, ತಾಷದಂತ ವಾದ್ಯ ಪರಿಕರಗಳು ನಿನಾದ ಮೆರುಗು ನೀಡಿದವು.
ಮಹಿಳಾ ಸಂಘದ ಸದಸ್ಯೆಯರಾದ 108ಕ್ಕೂ ಹೆಚ್ಚು ಮಹಿಳೆಯರು ಕಳಸದೊಂದಿಗೆ ಕುಂಭ ಹೊತ್ತು ಸಾಗಿದರು. ಉತ್ಸವದ ಅಂಗವಾಗಿ ಗ್ರಾಮ ದೇವತೆ ದುರ್ಗಾದೇವಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ದೇವಸ್ಥಾನವನ್ನೂ ಅಲಂಕಾರ ಮಾಡಲಾಗಿತ್ತು. ಮೆರವಣಿಗೆಯ ಬಳಿಕ ದೇವಸ್ಥಾನದಲ್ಲಿ ಕುಂಕುಮಾರ್ಚನೆ, ಅಭಿಷೇಕ, ಪಂಚಾಮೃತ ಅಭಿಷೇಕ ಪ್ರಸಾದ ವಿತರಣೆ ನಡೆದವು.
ದೇವಸ್ಥಾನ ನಿರ್ವಹಣಾ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ನಿರ್ದೇಶಕ ಮಂಡಳಿ ಸದಸ್ಯರಾದ ಗುಡ್ಡೇಕಲ್ ದ್ಯಾವಣ್ಣ, ಬಿ. ಲಿಗಂರಾಜಪ್ಪ, ಬಿ. ಕೃಷ್ಣಪ್ಪ, ಷಣ್ಮುಖಪ್ಪ ಹೊಸಮಲಿ, ಅಮರಜ್ಯೋತಿ ನರಸಪ್ಪ ಮೊದಲಾದವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.
ನಗರಸಭಾ ಉಪಾಧ್ಯಕ್ಷ ಶರಣಪ್ಪ ಹುಡೇಜಾಲಿ, ಸದಸ್ಯರಾದ ವೀರಭದ್ರಪ್ಪ ನಾಯಕ, ಕೆ. ವೆಂಕಟೇಶ, ವಿವಿಧ ಸಮಾಜದ ಮುಖಂಡರಾದ ಸಿಂಗನಾಳ ವಿರೂಪಾಕ್ಷಪ್ಪ, ಜೆ.ಕೆ. ನಾಯಕ, ಶರಣೇಗೌಡ ಮಾಲಿ ಪಾಟೀಲ್, ಸಿಂಗನಾಳ ವಿರೂಪಾಕ್ಷಪ್ಪ, ಹನುಮಂತಪ್ಪ ನಾಯಕ, ಅನ್ನಪೂರ್ಣಸಿಂಗ್, ರೇಖಾ, ಗೀತಾವಿಕ್ರಂ ಇದ್ದರು.