ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆ ಗೊತ್ತಾಗಿದ್ದೇ ಕರ್ನಾಟಕದಲ್ಲಿ:ಜೆ.ಎಸ್. ಕೇಹರ್

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಇಲ್ಲಿಗೆ ಬರುವ ಮುನ್ನ ಗಣಿಗಾರಿಕೆಯ ಆಳ ಇಷ್ಟೊಂದು ಇದೆ ಎಂದು ತಿಳಿದೇ ಇರಲಿಲ್ಲ. ರಾಜ್ಯ ಹೈಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಒಂದು ವರ್ಷದ ಅವಧಿಯಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ದೊರಕಿತು~ ಎಂದು ಸುಪ್ರೀಂಕೋರ್ಟ್‌ಗೆ ನೇಮಕಗೊಂಡಿರುವ ನ್ಯಾ. ಜೆ.ಎಸ್.ಕೇಹರ್ ಇಲ್ಲಿ ಹೇಳಿದರು.

ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಕೇಹರ್ ಅವರಿಗೆ ರಾಜ್ಯ ವಕೀಲರ ಪರಿಷತ್ತು ಸೋಮವಾರ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಪಂಜಾಬ್- ಹರಿಯಾಣ ಸೇರಿದಂತೆ ಇತರ ಹೈಕೋರ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಆದರೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಲ್ಲಿ ಯಾವುದೇ ಪ್ರಕರಣಗಳು ಇರಲಿಲ್ಲ. ಇದರಿಂದ ಈ ವಿಷಯದ ಬಗ್ಗೆ ನನಗೆ ತಿಳಿವಳಿಕೆಯೇ ಇರಲಿಲ್ಲ. ಅದರ ಅರಿವನ್ನು ಕರ್ನಾಟಕ ಮಾಡಿಸಿಕೊಟ್ಟಿದೆ~ ಎಂದರು.

`ಇಲ್ಲಿ ದಾಖಲಾಗುವ ಹೆಚ್ಚಿನ ಪ್ರಕರಣಗಳು ಸವಾಲಾಗಿವೆ. ಇದರ ಜೊತೆಗೆ ಇಲ್ಲಿಯ ವಕೀಲರು ಕೂಡ ಶ್ರಮಜೀವಿಗಳು~ ಎಂದು ಅವರು ತಿಳಿಸಿದರು.

ಹೈಕೋರ್ಟ್‌ಗೆ ಹೆಚ್ಚಿನ ರೀತಿಯಲ್ಲಿ ಭದ್ರತಾ ವ್ಯವಸ್ಥೆ ಮಾಡಿರುವುದು ಕೆಲ ವಕೀಲರಿಗೆ ಅಸಮಾಧಾನ ಆಗಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ನ್ಯಾ.ಕೇಹರ್, `ದೆಹಲಿ ಹೈಕೋರ್ಟ್‌ನಲ್ಲಿ ನಡೆದ ಘಟನೆ ಇಲ್ಲಿಯೂ ಮರುಕಳಿಸಬಾರದು ಎಂದು ಈ ರೀತಿ ಮಾಡಲಾಗಿದೆ. ಯಾವ ರೀತಿ ಭದ್ರತೆ ಒದಗಿಸಬೇಕು ಎನ್ನುವುದನ್ನು ನ್ಯಾಯಮೂರ್ತಿಗಳು ನಿರ್ಧರಿಸಿಲ್ಲ. ಬದಲಿಗೆ ಅದನ್ನು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಅದರಂತೆ ನಾವು ನಡೆದುಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದ ಇನ್ನಾವುದೇ ಸಮಸ್ಯೆ ಇದ್ದರೆ ನೂತನ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತನ್ನಿ~ ಎಂದು ಸೂಚಿಸಿದರು.

ಅಧಿಕಾರ ಸ್ವೀಕಾರ: ಬೀಳ್ಕೊಡುಗೆಗೆ ಮುನ್ನ ನಡೆದ ಕಾರ್ಯಕ್ರಮದಲ್ಲಿ, ಹೈಕೋರ್ಟ್ ನೂತನ ಹಿರಿಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ವಿಕ್ರಮಜಿತ್ ಸೇನ್ ಅವರು ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, `ನ್ಯಾಯಮೂರ್ತಿಗಳಾದವರು ಯಾವುದೇ ಭಯವಿಲ್ಲದೆ ತೀರ್ಪು ನೀಡಬೇಕು. ಯಾವುದೇ ಒತ್ತಡಗಳಿಗೆ ಮಣಿಯಬಾರದು~ ಎಂದರು. ಸದ್ಯ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ನ್ಯಾ. ಸೇನ್ ಅವರು ಶೀಘ್ರದಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

ಎಲ್ಲವೂ ಒಳ್ಳೆಯದು, ಆದರೆ...
ಬೆಂಗಳೂರಿನ ರಸ್ತೆಗಳ ಕುರಿತು ಮೊದಲ ದಿನವೇ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ. ವಿಕ್ರಮಜಿತ್ ಸೇನ್ ಅವರು, `ಬೆಂಗಳೂರಿನಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ನಾನು ಕೇಳಿದ್ದೇನೆ. ಆದರೆ ಇಲ್ಲಿಯ ಸಂಚಾರ ದಟ್ಟಣೆ ಹಾಗೂ ಕಿರಿದಾದ ರಸ್ತೆಗಳು ಮಾತ್ರ ಇದಕ್ಕೆ ಹೊರತಾಗಿವೆ. ಇಲ್ಲಿ ದಾಖಲಾಗುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪೈಕಿ ಹೆಚ್ಚಿನವು ರಸ್ತೆಗಳಿಗೇ ಸಂಬಂಧಿಸಿದ್ದು ಎಂಬುದು ನನ್ನ ಗಮನಕ್ಕೆ ಬಂದಿದೆ~ ಎಂದರು.

ಬಿಟಿಎಂ ಲೇಔಟ್ ಬಳಿ ವಸತಿ ಉದ್ದೇಶಕ್ಕೆ ಮೀಸಲು ಇರಿಸಿರುವ ಜಮೀನಿನಲ್ಲಿ ಆರು ಮಹಡಿಗಳ ವಾಣಿಜ್ಯ ಸಮುಚ್ಚಯ ನಿರ್ಮಾಣ ಆಗುತ್ತಿರುವ ಕುರಿತು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT