ಗದಗ: ‘ತಂದೆ-–ತಾಯಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಆರು ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ನೆರವಿನಿಂದ ರಕ್ಷಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ ಶರಣಪ್ಪ ಹೇಳಿದರು.
‘ಒಂದೇ ಕುಟುಂಬದ ನಾಲ್ವರು ಬಾಲಕರು, ಒಬ್ಬಳು ಬಾಲಕಿ (15) ಮತ್ತು ಈ ಬಾಲಕಿಯ ಪುತ್ರಿ ಸೇರಿದಂತೆ ಒಟ್ಟು ಆರು ಮಕ್ಕಳನ್ನು ರಕ್ಷಿಸಲಾಗಿದೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ನರಗುಂದದಲ್ಲಿ ನೀರಾವರಿ ಇಲಾಖೆಯಲ್ಲಿ ವಾಚ್ಮನ್ ಆಗಿ ಕೆಲಸ ಮಾಡುತ್ತಿರುವ ಲಕ್ಷ್ಮಣ ಬೆಲೀಫ್, ಪತ್ನಿ ಹಾಗೂ ಮಕ್ಕಳ ಪಾಲನೆಯಲ್ಲಿ ಕಾಳಜಿ ವಹಿಸದ ಕಾರಣ ಅವರಿಗೆ ಸಾಮಾಜಿಕ ಜ್ಞಾನ ಕೂಡಾ ಬೆಳೆದಿಲ್ಲ. ಸರ್ಕಾರಿ ನೌಕರಿಯಲ್ಲಿದ್ದರೂ ಮನೆಗೆ ವಿದ್ಯುತ್ ಇಲ್ಲ. ಸರಿಯಾಗಿ ಊಟ, ನಿದ್ದೆ, ಶಿಕ್ಷಣ, ಇಲ್ಲದೇ ಮಕ್ಕಳು ಸಾಮಾಜಿಕವಾಗಿ ಹೊರಗಿದ್ದಾರೆ’ ಎಂದು ಅವರು ಹೇಳಿದರು.
‘ಲಕ್ಷ್ಮಣ ಅವರ 15 ವಯಸ್ಸಿನ ಮಗಳು ಇತ್ತೀಚೆಗೆ ಮಗುವೊಂದಕ್ಕೆ ಜನ್ಮ ನೀಡಿದ್ದು, ಆ ಮಗುವಿನ ತಂದೆ ಯಾರೆಂಬುದನ್ನು ಪತ್ತೆ ಹಚ್ಚಲು ಡಿ.ಎನ್.ಎ ಪರೀಕ್ಷೆ ನಡೆಸಲಾಗುವುದು. ಇದಲ್ಲದೇ ಇದೇ ಕುಟುಂಬದಲ್ಲಿ ಒಂದೂವರೆ ವರ್ಷದ ಹಿಂದೆ ಜನಿಸಿದ ಮಗುವನ್ನು ಮಾರಾಟ ಮಾಡಲಾಗಿದೆಯೋ ಅಥವಾ ಅನಾರೋಗ್ಯದಿಂದ ಅದು ಮೃತಪಟ್ಟಿದೆಯೋ ಎಂಬುದು ತನಿಖೆಯಿಂದ ತಿಳಿಯಬೇಕಷ್ಟೇ’ ಎಂದು ಎಸ್ಪಿ ಹೇಳಿದರು.
‘ಮಾಹಿತಿ ತಿಳಿದು ನಾವು ನರಗುಂದದಲ್ಲಿರುವ ನೀರಾವರಿ ಇಲಾಖೆಯ ವಸತಿಗೃಹ ಬಳಿಯ ಶೆಡ್ವೊಂದಕ್ಕೆ ಭೇಟಿ ನೀಡಿದಾಗ ಮಕ್ಕಳು ಅನಾಗರಿಕತೆಯ ವಾತಾವರಣದಲ್ಲಿ ಬದುಕುತ್ತಿದ್ದವು. ಕನಿಷ್ಠ ಸ್ವಚ್ಛತೆ ಬಗ್ಗೆಯೂ ತಂದೆ–ತಾಯಿ ಅರಿವು ನೀಡದಿರುವುದು ಅವರನ್ನು ನೋಡಿದಾಗ ಎದ್ದು ಕಾಣುತ್ತಿತ್ತು.
ಈ ಬಗ್ಗೆ ಮಹಿಳೆಯನ್ನು ಕೇಳಿದಾಗ, ಮನೆಯ ಯಜಮಾನ ಲಕ್ಷ್ಮಣ ಮನೆಗೆ ಆಗಾಗ ಬರುತ್ತಾರೆ. ಸರ್ಕಾರಿ ನೌಕರಿಯಲ್ಲಿದ್ದು ರೂ 20,000 ಸಂಬಳ ಪಡೆಯುತ್ತಿದ್ದರೂ ಸಾಕಷ್ಟು ಸಾಲ ಮಾಡಿರುವುದರಿಂದ ಮನೆಗೆ ಏನೂ ಕೊಡುವುದಿಲ್ಲ ಎಂದು ಹೇಳಿದ್ದಾಳೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಈ ಮಕ್ಕಳನ್ನು ಒಪ್ಪಿಸಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಭಾರತಿ ಶೆಟ್ಟರ್ ತಿಳಿಸಿದರು.
ನರಗುಂದ ವರದಿ: ಲಕ್ಷ್ಮಣ ಬೆಲೀಫ್ ಈ ಮೊದಲು ಇಲ್ಲಿಯ ನೀರಾವರಿ ಇಲಾಖೆಯ ವಸತಿಗೃಹದಲ್ಲಿ ವಾಸವಾಗಿದ್ದರು. ಅವರು ಮತ್ತು ಅವರ ಹೆಂಡತಿ ಪಕ್ಕದ ಮನೆಯವರೊಡನೆ ಪದೇ ಪದೇ ಜಗಳವಾಡುತ್ತಿದ್ದುದರಿಂದ ಅವರನ್ನು ಅಲ್ಲಿಂದ ಹೊರಗೆ ಹಾಕಲಾಗಿತ್ತು. ಕೆಲವು ತಿಂಗಳಿಂದ ಅವರು ಅಲ್ಲಿಯೇ ಇದ್ದ ಶೆಡ್ವೊಂದರಲ್ಲಿ ವಾಸ ಮಾಡ ತೊಡಗಿದರು. ಅಲ್ಲಿ ವಿದ್ಯುತ್ ಮತ್ತಿತರ ಯಾವುದೇ ಸೌಲಭ್ಯಗಳಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.
ಹಿಂದಿನ ಐದಾರು ತಿಂಗಳಿಂದ ಕಚೇರಿಗೂ ಕೂಡ ಗೈರು ಆಗಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.