ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಖಾಸಗಿ ವಲಯದ ಉದ್ಯಮಗಳ ಉದ್ಯೋಗ ಅವಕಾಶಗಳಲ್ಲಿ ಭಾರೀ ಕಡಿತಗಳಾಗಿವೆ. ಜೊತೆಗೆ ಸಾವಿರಾರು ಉದ್ಯೋಗಿಗಳನ್ನು ಕಾರಣ ನೀಡದೆಯೇ ಕೆಲಸದಿಂದ ತೆಗೆದುಹಾಕಲಾಗಿದೆ.
ಪ್ರತಿವರ್ಷ ಸಾವಿರಾರು ಕಾಲೇಜುಗಳು ಲಕ್ಷಾಂತರ ಪದವೀಧರರನ್ನು ಸೃಷ್ಟಿಸುತ್ತವೆ. ಆದರೆ ಅಷ್ಟೇ ಪ್ರಮಾಣದ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇಲ್ಲ. ಮುಖ್ಯವಾಗಿ ಗರಿಷ್ಠ ವಯೋಮಿತಿ ಎಂಬ `ಲಕ್ಷ್ಮಣರೇಖೆ ದಾಟಿದ ಸಾವಿರಾರು ಪದವೀಧರರು ಅವಕಾಶ ವಂಚಿತರಾಗಿ ನಿರುದ್ಯೋಗಿಗಳಾಗಿ ಕುಳಿತಿದ್ದಾರೆ.
ಖಾಸಗಿ ವಲಯದ ಉದ್ಯಮಗಳಲ್ಲಿ ಕನಿಷ್ಠ ವಯಸ್ಸಿನ ಅಭ್ಯರ್ಥಿಗಳಿಗೇ ಮೊದಲ ಆದ್ಯತೆ ಮತ್ತು ಅವಕಾಶ. ಇದರಿಂದಾಗಿ ಸರ್ಕಾರಿ ಮತ್ತು ಖಾಸಗಿ ಎರಡೂ ವಿಭಾಗದಲ್ಲಿ ಈ ಗರಿಷ್ಠ ವಯೋಮಿತಿ ಮೀರಿದ ಪದವೀಧರರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ.
ಆದ್ದರಿಂದ ಕರ್ನಾಟಕ ಸರ್ಕಾರವಾದರೂ ಈ ಗರಿಷ್ಠ ವಯೋಮಿತಿ ಎಂಬ ತೊಡಕನ್ನು ನಿವಾರಿಸಿ ಉದ್ಯೋಗ ಎಂಬುದು ಬರೀ ಕನಸು ಎಂದು ಹತಾಶರಾಗಿ ಕುಳಿತ ಲಕ್ಷಾಂತರ ನಿರುದ್ಯೋಗಿ ಪದವೀಧರರಿಗೆ ಆಶಾಕಿರಣವಾಗಬಲ್ಲುದೇ?
-