ಶ್ರೀನಗರ (ಪಿಟಿಐ): ಗಗ್ರಾನ್ ಗ್ರಾಮದಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ನೆಲೆಯ ಹೊರಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಸಿಆರ್ಪಿಎಫ್ ಯೋಧರು ಹಾರಿಸಿದರು ಎನ್ನಲಾದ ಗುಂಡಿಗೆ ಒಬ್ಬ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಮೂಲ ಗಳು ತಿಳಿಸಿವೆ.
ಸಾವನ್ನಪ್ಪಿದ ವ್ಯಕ್ತಿಯನ್ನು ರಫೀಕ್ ಅಹ್ಮದ್ ಎಂದು ಗುರುತಿಸಲಾಗಿದೆ. ರಫೀಕ್ ಸಾವಿನ ನಂತರ ಹಿಂಸಾಚಾರಕ್ಕೆ ಇಳಿದ ಪ್ರತಿಭಟನಾಕಾರರು, ಭದ್ರತಾ ಪಡೆಯ ಹಿರಿಯ ಅಧಿಕಾರಿಗಳ ನಿವಾಸಕ್ಕೆ ಬೆಂಕಿ ಹಚ್ಚಿದರು ಎಂದು ಮೂಲಗಳು ಹೇಳಿವೆ. ಶನಿವಾರ ಕೂಡ ಭದ್ರತಾ ಪಡೆ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘಷರ್ಣೆಯಲ್ಲಿ ನಾಲ್ವರು ಗುಂಡಿಗೆ ಬಲಿಯಾದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಬುಧವಾರ ಹೊಸದಾಗಿ ಪ್ರತಿಭಟನೆ ನಡೆಸಿ, ಸಿಆರ್ಪಿಎಫ್ ನೆಲೆಯನ್ನು ಎತ್ತಂಗಡಿ ಮಾಡಲು ಮತ್ತು ಗುಂಡು ಹಾರಿಸಿದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.