ವನಸದಾ (ಪಿಟಿಐ): ಗುಜರಾತ್ನಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು, ಅಲ್ಪಸಂಖ್ಯಾತರು ಹಾಗೂ ಸಮಾಜದ ಇನ್ನಿತರ ಕೆಲ ವರ್ಗದವರು ಅಸುರಕ್ಷತೆಯಿಂದ ಬದುಕುವಂತಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದರು.ಗೋಧ್ರಾ ಪ್ರಕರಣದ ನಂತರದ ಗಲಭೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿ, ನಂತರ ಅಮಾನುತುಗೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಸ್ಥಿತಿಯನ್ನು ಮನಸ್ಸಿನಲ್ಲಿ ಇರಿಸಿಕೊಂಡು ಪ್ರಧಾನಿ ಹೀಗೆ ಹೇಳಿದ್ದು ಸ್ಪಷ್ಟವಾಗಿತ್ತು.
ಅಧಿಕಾರಿಗಳು, ಅಲ್ಪಸಂಖ್ಯಾತರು ಮತ್ತು ಇನ್ನಿತರ ವರ್ಗದವರಿಂದ ಸರ್ಕಾರದ ವಿರುದ್ಧ ಹಲವು ದೂರುಗಳು ಕೇಂದ್ರಕ್ಕೆ ಬರುತ್ತಿವೆ. ಅಧಿಕಾರಿಗಳಿಂದಲೂ ಇಂತಹ ದೂರು ಕೇಳಿಬರುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.ನವಸಾರಿ ಜಿಲ್ಲೆಯ ಬುಡಕಟ್ಟು ಜನರೇ ಹೆಚ್ಚಾಗಿರುವ ವನಸದಾ ಪಟ್ಟಣದಲ್ಲಿ ಪ್ರಥಮ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ, ವಿರೋಧ ಪಕ್ಷಗಳಂತೆ ತಾವು ಜನರ ಮಧ್ಯೆ ಬಿರುಕು ತರುವ ರಾಜಕೀಯ ಮಾಡುವುದಿಲ್ಲ. ಇದರಿಂದ ಯಾವುದೇ ರಾಜಕೀಯ ಪಕ್ಷಕ್ಕೆ ದೀರ್ಘಾವಧಿಯಲ್ಲಿ ಲಾಭವಾಗುವುದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದರು.