ಆಲಮಟ್ಟಿ: ಸರಕಾರ ಇಂದು ಶಾಲೆಗಳಿಗಾಗಿ ಸಾಕಷ್ಟು ಭೌತಿಕ ಸಂಪನ್ಮೂಲ ಒದಗಿಸಿದೆ, ಅಲ್ಲದೇ ಸಾಕಷ್ಟು ತರಬೇತಿಗಳನ್ನು ನೀಡಿದೆ, ಶಿಕ್ಷಕರು ಅರ್ಪಣಾ ಮನೋಭಾವದಿಂದ ಕಲಿಸಿದರೇ, ಮಕ್ಕಳಲ್ಲಿ ಗುಣಮಟ್ಟದ ಕಲಿಕೆ ಸಾಧ್ಯ ಎಂದು ವಿಜಾಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ (ಅಭಿವೃದ್ಧಿ) ಎಂ.ಎಂ. ಸಿಂಧೂರ ಹೇಳಿದರು.
ಅರಳದಿನ್ನಿಯಲ್ಲಿ ಶನಿವಾರ ಜರುಗಿದ ಆಲಮಟ್ಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಪರವಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಿಕ್ಷಕರು ಸದಾಪ್ರಯೋಗ ಶೀಲರಾಗಬೇಕು, ಅವರ ಬೋಧನಾ ವಿಧಾನದಲ್ಲಿ, ಇರುವಿಕೆಯಲ್ಲಿ, ಮನೋಭಾವದಲ್ಲಿ ಗಮನಾರ್ಹವಾದ ಬದಲಾವಣೆ ಆಗಬೇಕಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಮಾತನಾಡಿ, ಶಿಕ್ಷಕ ನಿರಂತರ ವಿದ್ಯಾರ್ಥಿಯಾಗಿದ್ದು, ಸದಾ ಅಧ್ಯಯನಶೀಲರಾಗಬೇಕು, ಶಿಕ್ಷಕರು ಮಕ್ಕಳಿಗೆ ಕಲಿಸದರೇ ಎಲ್ಲಾ ಅಧಿಕಾರಿಗಳು ಸಂತಸವಾಗುತ್ತದೆ, ಅದೇ ನಮಗೆ ನೀಡಿದ ಸನ್ಮಾನ ಎಂದರು. ಖಾಸಗಿ ಶಾಲೆಗಳ ಪೈಪೋಟಿಯಿಂದಾಗಿ ಸರಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿದೆ. ಆ ರೀತಿಯಾಗದಂತೆ ಗುಣಮಟ್ಟದ ಶಿಕ್ಷಣ ನೀಡಿ ಎಂದರು.
ಇದೇ ಸಂದರ್ಭದಲ್ಲಿ ಆಲಮಟ್ಟಿ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರ ಪರವಾಗಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ, ಪ್ರಭಾರಿ ಉಪನಿರ್ದೇಶಕ ಎಮ್.ಎಮ್. ಸಿಂಧೂರ, ನಿವೃತ್ತ ಶಿಕ್ಷಕರಾದ ಎಸ್.ಸಿ. ವಸ್ತ್ರದ, ಎಸ್.ಎಸ್. ಜಟಗಿಮಠ ಹಾಗೂ ನೂತನ ಸಿಆರ್ಪಿ ರಾಘವೇಂದ್ರ ಹೆಬ್ಬಾಳ, ಪಿ.ಎಸ್. ಇಜೇರಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಕ್ಷೇತ್ರ ಸಮನ್ವಯಾಧಿಕಾರಿ ಎಮ್.ಎ. ಗುಳೇದಗುಡ್ಡ, ಶಿಕ್ಷಣ ಸಂಯೋಜಕರಾದ ಎಸ್.ಎಸ್. ಹೊಸಮನಿ, ಪಿ.ಬಿ. ಮಾಡಗಿ, ಶಿಕ್ಷಕರ ಸಂಘದ ರಾಷ್ಟ್ರೀಯ ಮುಖಂಡ ಚಂದ್ರಶೇಖರ ನುಗ್ಲಿ, ಸಲೀಂ ದಡೇದ, ಹೇಮಂತ ದೊಡಮನಿ, ಸಿಆರ್ಪಿ ಆರ್.ಎಸ್. ಹೆಬ್ಬಾಳ, ಪಿ.ಎಸ್. ಇಜೇರಿ ಮೊದಲಾದವರಿದ್ದರು.
ಮುಖ್ಯಗುರು ಎಮ್.ಬಿ. ರಕರೆಡ್ಡಿ ಸ್ವಾಗತಿಸಿದರು. ಕೋಮಲಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಎಮ್.ಎಸ್. ಗೋಡಿಹಾಳ ವಂದಿಸಿದರು.