ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿಯೆಡೆಗೆ ತುಡಿಯುತ್ತಾ...

Last Updated 8 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಇ –ಕೊರಿಯರ್‍್ಸ್ ತಂಡ
ಇಂದು ಜೀವನದ ಪ್ರತಿಯೊಂದು ಹಂತದಲ್ಲೂ ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಇದನ್ನೇ ಮುಖ್ಯ ಬಂಡವಾಳವನ್ನಾಗಿ ರೂಪಿಸಿಕೊಂಡಿರುವ ಇಂದಿನ ಯುವಕರು ಹತ್ತು ಹಲವು ಕ್ಷೇತ್ರಗಳಿಗೆ ನೂತನ ತಂತ್ರಜ್ಞಾನಗಳನ್ನು ಪರಿಚಯಿಸುವುದರ ಮೂಲಕ ಯಶಸ್ವಿ ಉದ್ಯಮಪತಿಗಳಾಗಿ ಬೆಳೆಯುತ್ತಿದ್ದಾರೆ.

ಇಂತಹ ಉದ್ಯಮಿಗಳ ಸಾಲಿಗೆ ನಿಲ್ಲುವವರು ಮುಂಬೈ ಮೂಲದ ಶಿವ ಮಹಾದಿ, ಶ್ರೀನಿವಾಸ್‌ ಸಾಬ ಮತ್ತು ಶಶಿ ಶೇಖರ್‌. ಈ ಮೂವರು ಗೆಳೆಯರು ಕಟ್ಟಿದ್ದ ‘ಇ–ಕೊರಿಯರ್‍್ಸ’ ಕಂಪೆನಿ ಇಂದು ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಉತ್ತಮ  ವಹಿ ವಾಟು ನಡೆಸುತ್ತಿದೆ. ಕೇವಲ ಎರಡು ವರ್ಷಗಳ ಹಿಂದೆ ಆರಂಭವಾದ ಇ–ಕೊರಿಯರ್‍್ಸ ಇಂದು ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದೆ.
ಶಿವ, ಶ್ರೀನಿ ಮತ್ತು ಶಶಿ ಮೂಲತಃ ಎಂಜಿನಿಯರಿಂಗ್‌ ಪದವೀಧರರು.

ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿದ್ದ ಈ ಹುಡುಗರು ತಂತ್ರಜ್ಞಾನ ಬಳಸಿಕೊಂಡು ಉದ್ಯಮ ಆರಂಭಿ ಸಿದ ಯಶಸ್ವಿ ಕಥೆ ಇದು. ಇವರು ಸರಕು ಸಾಗಣೆ ಮಾಡುವ ಕೊರಿಯರ್‌ ಕಂಪೆನಿಗಳಿಗೆ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದರು. ಗ್ರಾಹಕರು ತಮ್ಮ ಮನೆ ಅಥವಾ ಕಚೇರಿಯ ಸಮೀಪ ಇರುವ ಕೊರಿಯರ್‌ ಕಂಪೆನಿಗಳಿಗೆ ತೆರಳಿ ತಾವು ಕಳುಹಿಸುವ ಸರಕುಗಳನ್ನು ಪಾರ್ಸಲ್‌ ಮಾಡುವುದು ಸಹಜ. ಇದರಿಂದ ಗ್ರಾಹಕರಿಗೆ ಅಲೆದಾಟ ಮಾತ್ರವಲ್ಲದೆ ಸಮಯವೂ ವ್ಯಯವಾಗುತ್ತದೆ. ಹಾಗಾಗಿ ಗ್ರಾಹಕರಿಗೆ ಅನುಕೂಲವಾಗಲೆಂದು ಇ–ಕೊರಿಯರ್‍್ಸ ಕಂಪೆನಿ ಕಟ್ಟಿದರು. ಇದಕ್ಕೆ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದರು.

ಗ್ರಾಹಕರು ಈ ತಂತ್ರಾಂಶದ ಮೂಲಕ ತಮ್ಮ ಸಮೀಪದ ಕೊರಿಯರ್‌ ಕಂಪೆನಿಗಳನ್ನು ಸುಲಭವಾಗಿ ಹುಡುಕಬಹುದು ಹಾಗೂ ಸರಕುಗಳನ್ನು ಎಲ್ಲಿಗೆ, ಯಾವಾಗ ಕಳುಹಿಸಬೇಕು ಎಂದು ಮಾಹಿತಿ ನೀಡಿದರೆ ಸಾಕು ಕೊರಿಯರ್‌ ಕಂಪೆನಿಯ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಸರಕನ್ನು ತೆಗೆದುಕೊಂಡು ಹೋಗುತ್ತಾರೆ. ಸರಕುಗಳನ್ನು ಮನೆಬಾಗಿಲಿಗೆ ಬಂದು ತೆಗೆದುಕೊಂಡು ಹೋಗುವುದಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎನ್ನುತ್ತಾರೆ ಶಿವ ಮಹಾದಿ. ಒಟ್ಟಿನಲ್ಲಿ ಇವರ ಈ ತಂತ್ರಜ್ಞಾನ ಕೋಟ್ಯಂತರ ಜನರಿಗೆ ಉದ್ಯೋಗ ನೀಡುವ ಅಕ್ಷಯಪಾತ್ರೆಯಾಗಿದೆ.
www.eCourierz.com

ಆಕೃತ ವೈಶ್‌
ಮುಂಬೈ ಮೂಲದ ಆಕೃತ ವೈಶ್‌ ಅವರದ್ದು ಮತ್ತೊಂದು ಮಜಲಿನ ತಂತ್ರಜ್ಞಾನದ ಯಶಸ್ವಿ ಕಥೆ. ಎಂಜಿನಿಯರಿಂಗ್‌ ಸಹವಾಸವೇ

ಸಾಕು ಎಂದು ತಾತ ಮುತ್ತಾತರಿಂದ ಬಳುವಳಿಯಾಗಿ ಬಂದಿದ್ದ ಬಟ್ಟೆ ವ್ಯಾಪಾರ ಮಾಡಲು ಹೋಗಿ ಕೈಸುಟ್ಟುಕೊಂಡು ಮತ್ತೆ ತಂತ್ರಜ್ಞಾನ ಕ್ಷೇತ್ರಕ್ಕೆ ಬಂದು ಆಕೃತ ಸಾಧನೆ ಮಾಡಿದ್ದಾರೆ.

ಆಕೃತ ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಿ. ಮನೆಯವರು ಮುಂಬೈನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಪಿಯುಸಿ ಮುಗಿದ ಬಳಿಕ ಆಕೃತನನ್ನು ಎಂಜಿನಿಯರಿಂಗ್‌ ಓದಲು ಅಮೆರಿಕಕ್ಕೆ ಕಳುಹಿಸಿಕೊಟ್ಟರು. ಎರಡೇ ವರ್ಷಕ್ಕೆ ಆಕೃತಗೆ ಅಮೆರಿಕ ಸಾಕು ಸಾಕಾಗಿತ್ತು.
ಅರ್ಧಕ್ಕೆ ಓದುಬಿಟ್ಟು ಭಾರತಕ್ಕೆ ಮರಳಿ, ಅಮೆರಿಕದಲ್ಲಿ ಓದುವುದಿಲ್ಲ ಎಂದು ಹಟಕ್ಕೆ ಬಿದ್ದರು. ಮಗನ ಮನವೊಲಿಸಿ ಮತ್ತೆ ಅಮೆರಿಕಕ್ಕೆ ಕಳುಹಿಸಿದರು. ಆದರೆ ಆಕೃತ ಇಷ್ಟಪಟ್ಟು ಓದಲೇ ಇಲ್ಲ. ಹೇಗೋ ಪದವಿ ಮುಗಿಸಿ ಭಾರತಕ್ಕೆ ಮರಳಿದರು.

ಮನೆಯವರು ಐಐಟಿ ಅಥವಾ ಐಐಎಂನಲ್ಲಿ ವಿದ್ಯಾಭ್ಯಾಸ ಮುಂದುವರೆಸುವಂತೆ ಒತ್ತಾಯ ಮಾಡಿದರು. ಆದರೆ ಆಕೃತ ಬಟ್ಟೆ ವ್ಯಾಪಾರ ಮಾಡುವುದಾಗಿ ಹೇಳಿದರು. ‌ ಪೋಷಕರ ವಿರೋಧದ ನಡುವೆಯೂ ಬಟ್ಟೆ ವ್ಯಾಪಾರಕ್ಕೆ ಕೈಹಾಕಿದರು. ಐದಾರು ತಿಂಗಳ ಬಳಿಕ ಈ ಬಟ್ಟೆ ವ್ಯಾಪಾರ ಆಕೃತಗೆ ಬೋರ್‌ ಹೊಡೆಯಿತು. ಇದು ನನ್ನ ಕ್ಷೇತ್ರವಲ್ಲ ಎಂಬುದನ್ನು ಅರಿತರು. ಮುಂದೆ ತನ್ನ ಎಂಜಿನಿಯರಿಂಗ್‌ ಗೆಳೆಯರೊಂದಿಗೆ ಸೇರಿ ಐಒಎಸ್್‌ ಮತ್ತು ಆಂಡ್ರಾಯಿಡ್‌ ಅಪ್ಲಿಕೇಶನ್‌ಗಳು ಮತ್ತು ವಿವಿಧ ರೀತಿಯ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸುವ ‘ಹ್ಯಾಪಿಕ್‌’ ಕಂಪೆನಿ ಪ್ರಾರಂಭಿಸಿದರು.

ದೊಡ್ಡದಾದ ಅಥವಾ ವಿಸ್ತೃತ ಮೆಸೇಜ್‌(ಸಂದೇಶ)ಗಳನ್ನು ಕಳುಹಿಸುವ ಅಪ್ಲಿಕೇಶನ್‌ಗಳನ್ನು ತಯಾರಿಸಿದ್ದಾರೆ. ಕೇವಲ ಒಂದು ವರ್ಷದಲ್ಲಿ 75 ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿರುವುದು ‘ಹ್ಯಾಪಿಕ್‌’ ಕಂಪೆನಿಯ ಹೆಗ್ಗಳಿಕೆ. ‘ಒಂದೆರಡು ವರ್ಷಗಳ ಹಿಂದೆ ಯಾರಿಗೂ ಬೇಡವಾಗಿದ್ದ ನಾನು ಇಂದು ಮನೆಯ ಮುದ್ದಿನ ಮಗ’ ಎಂದು ಆಕೃತ ನಗು ಬೀರುತ್ತಾರೆ. www.happik.in

ಗೌರವ್‌ ಸಿದ್ಧಾರ್ಥ
‘ಒಂದು ದಿನ ಮನೆಯಲ್ಲಿ ಮಲಗಿದ್ದೆ. ಇದ್ದಕ್ಕಿದ್ದಂತೆ ಒಂದು ತಿಂಗಳಿಗೆ ನಾನು ಎಷ್ಟು ರೂಪಾಯಿ ಖರ್ಚು ಮಾಡುತ್ತೇನೆ ಎಂದು ಯೋಚಿಸಿದೆ. ಲೆಕ್ಕ ಹಾಕಿದರೆ 30 ರಿಂದ 40 ಸಾವಿರ ರೂಪಾಯಿ! ಇಷ್ಟೊಂದು ಹಣವನ್ನು ವಿನಾಕಾರಣ ವ್ಯಯಿಸುತ್ತಿದ್ದೇನೆ ಎಂದು ಅರಿವಾಯಿತು. ಈ ಹಣವನ್ನು ಒಳ್ಳೆಯ ಉದ್ದೇಶಕ್ಕೆ ಏಕೆ ಬಳಸಬಾರದು ಎಂಬ ಆಲೋಚನೆ ಹೊಳೆಯಿತು. ನನಗೆ ಪ್ರವಾಸ ಮಾಡುವುದೆಂದರೆ ಅಚ್ಚುಮೆಚ್ಚು.

ಏಕತೆ ಮತ್ತು ಸೌಹಾರ್ದದ ಸಂದೇಶ ಸಾರುವ ಯಾತ್ರೆ ಕೈಗೊಳ್ಳಲು ಸಿದ್ಧತೆ ಮಾಡಿಕೊಂಡೆ. ಸೈಕಲ್‌ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಏಕತಾ ಯಾತ್ರೆ ಕುರಿತಂತೆ ಗೆಳೆಯರೊಂದಿಗೆ ಚರ್ಚಿಸಿದೆ. ಸುಮಾರು ನಾಲ್ಕು ಸಾವಿರ ಕಿ.ಮೀಗಳನ್ನು ಸೈಕಲ್‌ನಲ್ಲಿ ತೆರಳುವುದು ತಮಾಷೆಯ ಮಾತಲ್ಲ ಎಂದು ಎಲ್ಲಾ ಗೆಳೆಯರು ಹಿಂದೆ ಸರಿದರು. ನಾನು ಮಾತ್ರ ಬೈಸಿಕಲ್‌ನಲ್ಲಿ ಅಗತ್ಯ ಸರಕುಗಳ್ನು ತುಂಬಿಕೊಂಡು ಕಾಶ್ಮೀರದ ಕಡೆ ಮುಖ ಮಾಡಿದೆ. ಕೇವಲ 45 ದಿನಗಳಲ್ಲಿ ಕನ್ಯಾಕುಮಾರಿ ತಲುಪಿದೆ ಎಂದು ಗೌರವ್‌ ಸಿದ್ದಾರ್ಥ ಮುಗುಳು ನಗುತ್ತಾರೆ.

ಇದು ದೆಹಲಿ ಮೂಲದ ಗೌರವ್‌ ಸಿದ್ಧಾರ್ಥ್‌ ಅವರ ಆತ್ಮವಿಶ್ವಾಸ ಮತ್ತು ಇಚ್ಛಾಶಕ್ತಿಯ ಕಥೆ. ಗೆಳೆಯರು ಕೈಕೊಟ್ಟರು ಎಂದು ಪರಿತಪಿಸದೆ ಗೌರವ್‌ ತಾನು ಅಂದುಕೊಂಡಿದ್ದನ್ನು ಸಾಧಿಸಿ ಬಿಟ್ಟರು.  ಇಚ್ಛಾಶಕ್ತಿಯಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಾದರಿಯಾಗಿ ನಿಲ್ಲುತ್ತಾರೆ. ಗೌರವ್‌ ಜಾಲಿಗಾಗಿ ಈ ಯಾತ್ರೆ ಮಾಡಲಿಲ್ಲ. ಯಾತ್ರೆಯ ಉದ್ದಕ್ಕೂ ಯುವಕರನ್ನು ಭೇಟಿ ಮಾಡಿ ಅವರಲ್ಲಿ ಏಕತೆ ಮತ್ತು ಸೌಹಾರ್ದದ ಬಗ್ಗೆ ಜಾಗೃತಿ ಮೂಡಿಸಿದ್ದು ವಿಶೇಷ.

ಪ್ರತಿನಿತ್ಯ ದಣಿವರೆಯದೆ 120 ಕಿ.ಮೀ ಪ್ರಯಾಣ ಮಾಡಿ ಕನ್ಯಾಕುಮಾರಿಯನ್ನು 45 ದಿನಗಳಲ್ಲಿ ಕ್ರಮಿಸಿದರು. ಯಾತ್ರೆಯ ಉದ್ದಕ್ಕೂ ಹಲ ವಾರು ಸಂಕಷ್ಟಗಳನ್ನು ಎದು ರಿಸಿ ಗುರಿ ಮುಟ್ಟಿದ ಗೌರವ್‌ ಸಾಧನೆ ನಿಜಕ್ಕೂ ಅನನ್ಯ. ಜೆಎನ್‌ಯು ವಿಶ್ವವಿದ್ಯಾ ಲಯದಲ್ಲಿ ಪದವಿ ಓದುತ್ತಿ ರುವ ಗೌರವ್‌ ‘ಯುವಕರ ಜೀವನ ಶೈಲಿ ಬದಲಾಗ ಬೇಕು. ಬದುಕು ಇರುವುದು ಮೋಜಿಗಾಗಿ ಅಲ್ಲ, ಪರರ ಉಪಕಾರಕ್ಕೆ ಎಂಬುದನ್ನು ಅರಿಯಬೇಕು’ ಎಂದು ಯುವಕರಿಗೆ ಕಿವಿ ಮಾತು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT