ಗುಲ್ಬರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ವಿರುದ್ಧದ ಅವಿಶ್ವಾಸ ಗೊತ್ತುವಳಿ ನಿರ್ಣಯವು 23–0 ಮತಗಳಿಂದ ಸೋಮವಾರ ಅಂಗೀಕೃತಗೊಂಡಿದೆ.
ಅಧ್ಯಕ್ಷ ಶರಣಪ್ಪ ವಿ. ಪೊಲೀಸ್ ಪಾಟೀಲ ಹಾಗೂ ಉಪಾಧ್ಯಕ್ಷೆ ಪಾರ್ವತಿ ಚವ್ಹಾಣ ಅವರನ್ನು ಕೆಳಗಿಳಿಸುವ ಮೂಲಕ ಕಾಂಗ್ರೆಸ್ ಮತ್ತೆ ಮೇಲುಗೈ ಸಾಧಿಸಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಸೋಮವಾರ ಬೆಳಿಗ್ಗೆ ಅವಿಶ್ವಾಸ ಗೊತ್ತುವಳಿ ಸಭೆ ನಡೆಯಿತು. ಅಧಕ್ಷ ಹಾಗೂ ಉಪಾಧ್ಯಕ್ಷೆ ಅವರ ಅನುಪ ಸ್ಥಿತಿಯಲ್ಲಿ ಶಂಭುಲಿಂಗ ಗುಂಡಗರ್ತಿ ಸಭೆಯ ಅಧ್ಯಕ್ಷತೆ ವಹಿಸಿದರು. ಒಟ್ಟು 43 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ ಹಾಗೂ ಬಂಡಾಯ ಬಿಜೆಪಿ ಸದಸ್ಯರು ಮಂಡಿಸಿದ ಅವಿಶ್ವಾಸವು 23 ಮತಗ ಳಿಂದ ಅಂಗೀಕೃತಗೊಂಡಿತು. ಚುನಾ ವಣಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಲ್ಲವಿ ಆಕುರಾತಿ ಸಭೆಯ ಬಳಿಕ ಈ ವಿಷಯ ತಿಳಿಸಿದರು.
ಮತದಾನ: ಅವಿಶ್ವಾಸದ ಪರ ಕಾಂಗ್ರೆಸ್ನ 18, ಜೆಡಿಎಸ್ನ 2 ಹಾಗೂ ಬಂಡಾಯ ಬಿಜೆಪಿಯ 3 ಮತಗಳು ಬಿದ್ದವು. ಬಿಜೆಪಿಯ ಉಳಿದ 17 ಸದಸ್ಯರು, ಪಕ್ಷೇತರ ಸದಸ್ಯೆ ಶೋಭಾ ಬಾಣಿ ಹಾಗೂ ಜೆಡಿಎಸ್ನ ಒಬ್ಬರು ಗೈರಾಗಿದ್ದರು.
ಹಿಂದಿನ ಬಾರಿ ಕಾಂಗ್ರೆಸ್ನಲ್ಲಿ ಬಂಡಾಯ ಎದ್ದಿದ್ದ ಸದಸ್ಯ ಸಾಯಿಬಣ್ಣ ಅಡ್ಡೇಶಿ ತಡವಾಗಿ ಬಂದು ಮತದಾನ ಮಾಡದೇ ವಾಪಾಸಾದರು. ಆದರೆ ಈ ಹಿಂದೆ ಕಾಂಗ್ರೆಸ್ನಲ್ಲಿ ಬಂಡಾಯವೆದ್ದಿದ್ದ ಪುಷ್ಪಾವತಿ ರೆಡ್ಡಿ ಅವಧಿಗೂ ಮೊದಲೇ ಸಭೆಯಲ್ಲಿ ಹಾಜರಿದ್ದು, ಅವಿಶ್ವಾಸ ಪರ ಕಾಂಗ್ರೆಸ್ ಸದಸ್ಯರೊಂದಿಗೆ ಮತದಾನ ಮಾಡಿದರು.