ಅಹಮದಾಬಾದ್ (ಪಿಟಿಐ): ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದ ಜಾಕಿಯಾ ಜಾಫ್ರಿ ಅವರಿಗೆ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡವು (ಎಸ್ಐಟಿ) ಸೋಮವಾರ ತನ್ನ ವರದಿಯನ್ನು ನೀಡಿತು.
2002ರಲ್ಲಿ ಗೋಧ್ರಾ ಘಟನೆಯ ಬಳಿಕ ನಡೆದ ಕೋಮುಗಲಭೆಯಲ್ಲಿ ಜಾಕಿಯಾ ಪತಿ, ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿದಂತೆ 69 ಜನರನ್ನು ಹತ್ಯೆ ಮಾಡಲಾಗಿತ್ತು.
2002ರ ಗಲಭೆಯ ಸಂಚಿನಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು 57 ಜನರು ಶಾಮಿಲಾಗಿದ್ದರು ಎಂದು ಜಾಕಿಯಾ ಗಂಭೀರವಾದ ಆರೋಪ ಮಾಡಿದ್ದರು.
ಇಲ್ಲಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಂ.ಎಸ್. ಭಟ್ ಅವರ ಸಮ್ಮುಖದಲ್ಲಿ ವಿಶೇಷ ತನಿಖಾ ತಂಡವು 68 ಸಂಪುಟ, 2,200 ಅನುಬಂಧ, 25 ಸಿ.ಡಿಗಳು ಮತ್ತು 89 ಪುಟಗಳ ಅನುಕ್ರಮಣಿಕೆಯನ್ನೊಳಗೊಂಡ 541 ಪುಟಗಳ ವರದಿ ಪ್ರತಿಯನ್ನು ಜಾಕಿಯಾ ಅವರಿಗೆ ಒಪ್ಪಿಸಿತು.
ನ್ಯಾಯಾಲಯದ ಸಲಹೆಗಾರ ರಾಜು ರಾಮಚಂದ್ರನ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಿದ್ಧಪಡಿಸಿದ ವರದಿಯನ್ನು ಕೂಡ ಈ ದಾಖಲೆಗಳು ಒಳಗೊಂಡಿದೆ.
ಮೆಟ್ರೊಪಾಲಿಟನ್ ಕೋರ್ಟ್ ಈ ವಿಷಯದ ಕುರಿತು ಮೇ10ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಮೇ10ರ ಒಳಗಾಗಿ ವಿಶೇಷ ತನಿಖಾ ತಂಡವು ಜಾಕಿಯಾ ಅವರಿಗೆ ವರದಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಬೇಕೆಂದು ಈ ಹಿಂದೆ ಕೋರ್ಟ್ ಸೂಚನೆ ನೀಡಿತ್ತು.