ನವದೆಹಲಿ (ಪಿಟಿಐ): ರಾಷ್ಟ್ರದ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ, ಅಮೆರಿಕ ಮೂಲದ ಜಾಗತಿಕ ಅಂತರ್ಜಾಲ ಸಂಸ್ಥೆ ಗೂಗಲ್ ಜತೆಗಿನ ಉದ್ದೇಶಿತ ಒಪ್ಪಂದವನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟಿದೆ.
ಪ್ರಮುಖ ರಾಜಕೀಯ ಪಕ್ಷಗಳೂ ಸೇರಿದಂತೆ ಅನೇಕರು ಗೂಗಲ್ ಜತೆಗಿನ ಒಪ್ಪಂದ ಕುರಿತು ಸಂದೇಹ ವ್ಯಕ್ತಪಡಿಸಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಅಗತ್ಯ ಸೇವಾ ಸೌಲಭ್ಯ ಮತ್ತು ಪ್ರತಿಕ್ಷಣದ ಮಾಹಿತಿ ಒದಗಿಸುವ ಉದ್ದೇಶದಿಂದ ಗೂಗಲ್ ಜತೆ ಒಪ್ಪಂದ ಮಾಡಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿತ್ತು.
ಚುನಾವಣೆ ವೇಳೆ ತಾನು ಒದಗಿಸುವ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಗೂಗಲ್ ಸಂಸ್ಥೆ ಇತ್ತೀಚೆಗೆ ಆಯೋಗದ ಕಚೇರಿಯಲ್ಲಿ ಪರಿಚಯ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು. ಆದರೆ, ಈ ಯೋಜನೆಗೆ ಆಕ್ಷೇಪ ತೀವ್ರವಾದ ಹಿನ್ನೆಲೆಯಲ್ಲಿ ಸಾಧಕ–ಬಾಧಕಗಳ ಕುರಿತು ಚರ್ಚಿಸಲು ಆಯೋಗ ಗುರುವಾರ ಸಭೆ ಕರೆದಿತ್ತು.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್, ಆಯುಕ್ತರಾದ ಎಚ್.ಎಸ್. ಬ್ರಹ್ಮ ಮತ್ತು ಎಸ್ಎನ್ಎ ಜೈದಿ ಉದ್ದೇಶಿತ ಒಪ್ಪಂದ ಕೈಬಿಡುವ ತೀರ್ಮಾನಕ್ಕೆ ಬಂದರು.
ತಾನು ನೀಡುವ ಮಹತ್ವದ ಮಾಹಿತಿಗಳನ್ನು ಬಹಿರಂಗ ಪಡಿಸದಂತೆ ಆಯೋಗ ಈ ಮೊದಲ ಗೂಗಲ್ ಸಂಸ್ಥೆ ಯ ಜತೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ಆದರೆ, ಇದುವರೆಗೂ ಆಯೋಗ, ಸಂಸ್ಥೆಗೆ ಯಾವುದೇ ಮಾಹಿತಿ ಅಥವಾ ಅಂಕಿ, ಅಂಶಗಳನ್ನು ಹಸ್ತಾಂತರಿಸಿಲ್ಲ.
ಗೂಗಲ್ ಸರ್ಚ್ ಎಂಜಿನ್ ಬಳಸಿ ಮತದಾರಿಗೆ ಮಾಹಿತಿ ನೀಡುವ ಉದ್ದೇಶಿತ ಯೋಜನೆಗೆ ಕಾಂಗ್ರೆಸ್ ಮತ್ತು ಬಿಜೆಪಿಗಳಲ್ಲದೇ ಸೈಬರ್ ತಂತ್ರಜ್ಞರು ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಒಪ್ಪಂದ ಕೈಬಿಡುವುದು ಲೇಸು ಎಂದು ಕಾಂಗ್ರೆಸ್ನ ಕಾನೂನು ಘಟಕ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿತ್ತು. ಸರ್ವಪಕ್ಷಗಳ ಸಭೆ ಕರೆದು ಒಪ್ಪಿಗೆ ಪಡೆಯುವಂತೆ ಬಿಜೆಪಿ ಸಲಹೆ ನೀಡಿತ್ತು.
ದೇಶದ ಚುನಾವಣೆಗೆ ಸಂಬಂಧಿಸಿದ ಅಂಕಿ, ಅಂಶಗಳು ಮತ್ತು ಮಹತ್ವದ ದಾಖಲೆಗಳನ್ನು ವಿದೇಶಿ ಸಂಸ್ಥೆಯೊಂದಕ್ಕೆ ಒಪ್ಪಿಸುವುದು ಅಮೆರಿಕದ ಬೇಹುಗಾರಿಕಾ ಇಲಾಖೆಗೆ ಒಪ್ಪಿಸಿಂತೆ. ರಾಷ್ಟ್ದ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇದು ಸಮ್ಮತವಲ್ಲ ಎಂದು ಸೈಬರ್ ತಜ್ಞರು ಸಲಹೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.