ಚಡಚಣ: ಸಮೀಪದ ತದ್ದೇವಾಡಿ ಗ್ರಾಮದ ಶ್ರೀ ಗುರು ಚಂದ್ರಶೇಖರ ಸಂಸ್ಥಾನ ಹಿರೇಮಠದಲ್ಲಿ ಈಚೆಗೆ ಗುರುಪೌರ್ಣಿಮೆ ಕಾರ್ಯಕ್ರಮದ ನಿಮಿತ್ಯ ಆಯೋಜಿಸಲಾದ ಉಚಿತ ಸಾಮೂಹಿಕ ವಿವಾಹದಲ್ಲಿ 31 ಜೋಡಿಗಳು ಗೃಹಸ್ಥಾಮಶ್ರಮಕ್ಕೆ ಕಾಲಿರಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಮಂದ್ರೂಪದ ರೇಣುಕ ಶಿವಾಚಾರ್ಯ ಆಶೀರ್ವಚನ ನೀಡಿ, ಸಾಮೂಹಿಕ ವಿವಾಹದಿಂದ ಸಮಾಜದಲ್ಲಿ ಸಮಾನತೆ, ಸಹಬಾಳ್ಳೆಯನ್ನು ಮೂಡಿಸಿ ಆರ್ಥಿಕ ಮಿತವ್ಯಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಹತ್ತಳ್ಳಿ ಹಾವಿನಾಳದ ಗುರು ಗುರುಪಾದೇಶ್ವರ ಶಿವಾಚಾರ್ಯ ಆಶೀರ್ವಚನ ನೀಡಿ, ವಿವಾಹಗಳು ಸ್ವರ್ಗದಲ್ಲಿ ನಡೆಯುತ್ತವೆ. ನವಜೋಡಿಗಳು ಜೀವನದುದ್ದಕ್ಕೂ ಕಷ್ಟ ಸುಖಗಳಲ್ಲಿ ಒಂದಾಗಿ, ಸಂಸಾರದಲ್ಲಿದ್ದು ಇಲ್ಲದಂತೆ, ಪಾರಮಾರ್ಥಕ ಜೀವನ ನಡೆಸಿ ಎಂದರು.
ಸೊಲ್ಲಾಪುರದ ಮಾಜಿ ಶಾಸಕ ಶಿವಶರಣ ಪಾಟೀಲ ಮಾತನಾಡಿ, ಸಂಘ ಸಂಸ್ಥೆಗಳು, ಮಠ ಮಾನ್ಯಗಳು ಸಾಮೂಹಿಕ ವಿವಾಹಗಳನ್ನು ಉತ್ತೇಜಿಸಿ ಸಾಮಾಜಿಕ ಸಮಾನತೆಗೆ ಪ್ರೋತ್ಸಾಹಿಸಬೇಕು ಎಂದರು.
ಶಿಕ್ಷಕ ಮಹಾಂತೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಗುರು ಚಂದ್ರಶೇಖರ ಸಂಸ್ಥಾನ ಹಿರೇಮಠದ ಸಾಧನೆಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅರ್ಜುನ ರಾಠೋಡ, ಬಾಬುಸಾಹುಕಾರ ಮೇತ್ರಿ, ಜಿ.ಪಂ. ಮಾಜಿ ಸದಸ್ಯ ಅಣ್ಣಪ್ಪ ಖೈನೂರ, ಮುಖಂಡರಾದ ಕೆ.ಎಸ್. ಪಾಟೀಲ, ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷೆ ದಾನಮ್ಮ ಪಾಟೀಲ,ತಾ.ಪಂ ಸದಸ್ಯ ಬಸಣ್ಣ ಗಚ್ಚಿನಕಟ್ಟಿ, ಮಾಜಿ ಸದಸ್ಯ ಇಕ್ಬಾಲ್ ಪಠಾಣ, ಎಂ.ಎಂ. ಕೌಚಾಳೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಾನಂದ ಭೈರಗೊಂಡ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುತ್ತಲಿನ ಹತ್ತಾರು ಗ್ರಾಮಗಳಿಂದ ಆಗಮಿಸಿದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಭದ್ರಯ್ಯಾ ಸ್ವಾಮೀಜಿ ಸ್ವಾಗತಿಸಿದರು. ಸಾಹೇಬಗೌಡ ಬಿರಾದಾರ ವಂದಿಸಿದರು.