ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಗೂಡಾದ ಸಾಮಾನ್ಯ ಸಭೆ!

Last Updated 23 ಫೆಬ್ರುವರಿ 2012, 10:20 IST
ಅಕ್ಷರ ಗಾತ್ರ

ಕೃಷ್ಣರಾಜಪೇಟೆ: ಪ್ರೊಬೆಷನರಿ ಉಪವಿಭಾಗಾಧಿಕಾರಿ ಬಸವರಾಜು ಮುಖ್ಯಾಧಿಕಾರಿಯಾಗಿದ್ದ ಅವಧಿಯಲ್ಲಿ ಭಾರಿ ಅವ್ಯವಹಾರಗಳಾಗಿದ್ದು ಅದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂಬ ವಿಷಯದ ಪರ ಮತ್ತು ವಿರೋಧವಾಗಿ ನಡೆದ ಗಂಭೀರ ಚರ್ಚೆಗೆ ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಬಸವರಾಜು ಅವರ ಕಾಲದಲ್ಲಿ ಹಣಕಾಸಿನ ಅವ್ಯವಹಾರಗಳು ನಡೆದಿದ್ದು ಆ ಬಗ್ಗೆ ತನಿಖೆ ನಡೆಸಿ ಎಂದು ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ ಸಭೆಯಲ್ಲಿ ಪ್ರಸ್ತಾಪಿಸಿದಾಗ ಚರ್ಚೆಗೆ ಗ್ರಾಸವಾಯಿತು. ಆಡಳಿತ ಪಕ್ಷದ ಸದಸ್ಯರು ಪ್ರಸ್ತಾವನೆಯನ್ನು ಬೆಂಬಲಿಸಿದರೆ, ವಿರೋಧ ಪಕ್ಷದ ಸದಸ್ಯರು ಬಸವರಾಜು ವರ್ಗವಾಗಿ ಬಹಳ ದಿನಗಳಾಗಿದ್ದು, ಈ ಬಗೆಗಿನ ತನಿಖೆಗೆ ಇದು ಸಕಾಲವಲ್ಲ ಎಂದರು. ಇದರಿಂದ  ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಒಬ್ಬರ ಮಾತು ಮತ್ತೊಬ್ಬರಿಗೆ ಕೇಳಿಸದಂತಹ ಪರಿಸ್ಥಿತಿ ಉಂಟಾಗಿತ್ತು.

ಪಟ್ಟಣದ ಪ್ರತಿ ವಾರ್ಡ್‌ಗೆ ಅಳವಡಿಸಲು ಸೋಡಿಯಂ ದೀಪಗಳ ಖರೀದಿ, ಕುಡಿಯುವ ನೀರಿನ ಮಾಸಿಕ ಶುಲ್ಕ 60 ರೂಪಾಯಿಗೆ ಹೆಚ್ಚಳ, ತಾಲ್ಲೂಕು ಕಸಾಪ, ಕಾರ್ಯನಿರತ ಪತ್ರಕರ್ತರ ಸಂಘ, ಮತ್ತಿತರ ಸಂಘಟನೆಗಳಿಗೆ ನಿವೇಶನ ನೀಡಿಕೆ, ಎಸ್‌ಎಫ್‌ಎ ಅನುದಾನ, 13ನೇ ಹಣಕಾಸು ಯೋಜನೆಯ ಅನುದಾನದ ಬಳಕೆ, ಪಟ್ಟಣದ ವಿವಿಧೆಡೆ ಸ್ವಾಗತ ಕಮಾನುಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿತು.

ಪುರಸಭೆ ಅಧ್ಯಕ್ಷ ಕೆ.ಎಚ್.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಂದ್ರಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಪ್ರೇಂಕುಮಾರ್, ಸದಸ್ಯರಾದ ಭಾಗ್ಯಮ್ಮ, ಚಂದ್ರೇಗೌಡ, ಕೆ.ಸಿ.ಮಂಜುನಾಥ್, ಕೆ.ಎಸ್.ಹರಪ್ರಸಾದ್, ಕೆ.ಆರ್.ನೀಲಕಂಠ, ಅಬ್ದುಲ್ ಘನಿ, ಶಕುಂತಲಾ, ಮಂಜುಳಾ ಚನ್ನಕೇಶವ ಇತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT