ನವದೆಹಲಿ: ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ಭಾಗೀರತಿ ಕನ್ನಡ ಚಿತ್ರ ಗೋವಾದ ಪಣಜಿಯಲ್ಲಿ ನಡೆಯುವ 42 ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ `ಇಂಡಿಯನ್ ಪ್ರೀಮಿಯರ್~ ವಿಭಾಗಕ್ಕೆ ಆಯ್ಕೆ ಮಾಡಲಾಗಿದೆ ಎಂದು ಗೋವಾ ಚಿತ್ರೋತ್ಸ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ಶ್ರೀವಾತ್ಸವ ತಿಳಿಸಿದ್ದಾರೆ.
ಭಾರತದಲ್ಲಿ ತೀರಾ ಇತ್ತೀಚೆಗೆ ನಿರ್ಮಾಣಗೊಂಡ ಆಯ್ದ ಉತ್ತಮ ಚಿತ್ರಗಳ ಪ್ರಥಮ ಪ್ರದರ್ಶನಕ್ಕೆ ಈ ವಿಭಾಗ ಮೀಸಲಾಗಿದೆ.
ಪ್ರಸಿದ್ಧ ಕನ್ನಡ ಜನಪದ ಕಥನ ಗೀತೆ `ಕೆರೆಗೆ ಹಾರ~ ವನ್ನು ಆಧರಿಸಿದ ಈ ಚಿತ್ರ ಕೆರೆಗಳ ಮಹತ್ವವನ್ನು ಹೇಳುತ್ತಲೇ ಮೌಢ್ಯದ ಅಮಾನವೀಯತೆಯನ್ನು ಅನಾವರಣಗೊಳಿಸುತ್ತದೆ ಎಂದು ವಿವರಿಸಲಾಗಿದೆ.
ಬಿ.ಕೆ.ಶ್ರೀನಿವಾಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಶ್ರೀನಾಥ್, ಭಾವನಾ, ಕಿಶೋರ್, ತಾರಾ, ಹೇಮಾಚೌಧರಿ, ಶಿವಧ್ವಜ್ ಮೊದಲಾದವರಿದ್ದಾರೆ. ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ಬರಗೂರು ಅವರದೇ.