ಕೊಪ್ಪಳ: ಬಾಕಿ ಇರುವ ಗೌರವ ಧನವನ್ನು ಪಾವತಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ನ ಜಿಲ್ಲಾ ಸಮಿತಿ ಸದಸ್ಯರು ಮಂಗಳವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಮುಖಂಡ ಬಸವರಾಜ ಶೀಲವಂತರ, ಬಾಕಿ ಇರುವ ಗೌರವ ಧನವನ್ನು ತಕ್ಷನ ಬಿಡುಗಡೆ ಮಾಡುವ ಜೊತೆಗೆ ಗೌರವ ಧನವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲೆಯಲ್ಲಿ ಖೊಟ್ಟಿ ನೇಮಕಾತಿ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಸಹಾಯಕಿಯರಿಗೆ ಆದ್ಯತೆ ಮೇಲೆ ಅಂಗನವಾಡಿ ಕಾರ್ಯಕರ್ತೆಯರು ಎಂಬುದಾಗಿ ನೇಮಕಾತಿ ಆದೇಶ ನೀಡಬೇಕು, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನೀಡಬೇಕಾದ ತತ್ತಿಗೆ ಸಂಬಂಧಿಸಿದಂತೆ ಹಣ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮುಖಂಡರಾದ ಮಮ್ತಾಜ್ ಕಂದಗಲ್, ಶೈಲಜಾ ಶಶಿಮಠ, ಮುಖಂಡರಾದ ಎಸ್.ಎ.ಗಫಾರ್, ರಮೇಶ ಚಿಕೇನಕೊಪ್ಪ, ಗಾಳೆಪ್ಪ ಮುಂಗೋಲಿ ನೇತೃತ್ವ ವಹಿಸಿದ್ದರು.