ಹುಬ್ಬಳ್ಳಿ: ಎರಡು ವರ್ಷದ ಕೂಸು ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕ್ರಮೇಣ ತನ್ನ ಶೈಕ್ಷಣಿಕ ಚಟುವಟಿಕೆಯನ್ನು ವಿಸ್ತರಿಸುತ್ತಾ ಸಾಗಿದ್ದು, ಹೊಸ ಬಗೆಯ ವಿಷಯಗಳ ಕಲಿಕೆಗೆ ಅವಕಾಶ ಕಲ್ಪಿಸಿದೆ. ಗ್ರಾಮೀಣ ಹಾಗೂ ಬುಡಕಟ್ಟು ನಿರ್ವಹಣೆ ವಿಷಯದಲ್ಲಿ ಎಂಬಿಎ ಕಲಿಕೆಯು ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡುತ್ತಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿ ದೇಶದ ಮೊದಲ ಜಾನಪದ ವಿಶ್ವವಿದ್ಯಾಲಯ ಎಂಬ ಹಿರಿಮೆಯೊಂದಿಗೆ ಆರಂಭವಾಗಿದ್ದ ವಿಶ್ವವಿದ್ಯಾಲಯ ಈಗ ಗ್ರಾಮೀಣ ವಿಷಯದಲ್ಲಿ ಎಂಬಿಎ ಕಲಿಕೆ ಆರಂಭಿಸಿ ಮತ್ತೊಂದು ಶ್ರೇಯ ತನ್ನದಾಗಿಸಿಕೊಂಡಿದೆ. ಕಳೆದ ಶೈಕ್ಷಣಿಕ ವರ್ಷದಿಂದ ಆರಂಭಗೊಂಡ ಈ ಕೋರ್ಸ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ವರ್ಷ ಒಟ್ಟು 11 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಈ ಶೈಕ್ಷಣಿಕ ವರ್ಷದಲ್ಲಿ 21 ವಿದ್ಯಾರ್ಥಿಗಳು ಕಲಿಕೆಯ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಗ್ರಾಮೀಣ ವಿಷಯದಲ್ಲಿ ಎಂಬಿಎ ಕಲಿಕೆಯು ಹೊಸ ಬಗೆಯ ಪ್ರಯತ್ನ. ಎಂಬಿಎ ಎಂದರೆ ಕೇವಲ ವಾಣಿಜ್ಯ ವಿಷಯ ಎಂಬ ಭಾವ ತೊಡೆದುಹಾಕಿ, ಗ್ರಾಮೀಣ ಹಾಗೂ ಬುಡಕಟ್ಟು ಜನರ ಜನಜೀವನ, ಸ್ಥಿತಿಗತಿಯ ನಿರ್ವಹಣೆಯ ಕುರಿತು ಈ ವಿಷಯ ಬೆಳಕು ಚೆಲ್ಲಲಿದೆ.
‘ವಿಶ್ವವಿದ್ಯಾಲಯದ ಪಠ್ಯಕ್ರಮವನ್ನು ರೂಪಿಸುವ ಸಂದರ್ಭ ಜಾನಪದ ವಿಷಯದಲ್ಲಿ ಎಂಬಿಎ ಕೋರ್ಸ್ ಆರಂಭಕ್ಕೆ ಪ್ರಸ್ತಾವ ಬಂತು. ಅದನ್ನು ಇನ್ನಷ್ಟು ಚರ್ಚಿಸಿ ಕೋರ್ಸ್ ರೂಪಿಸಲಾಯಿತು’ ಎನ್ನುತ್ತಾರೆ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ.
‘ಸಂಪೂರ್ಣ ಗ್ರಾಮೀಣಾಭಿವೃದ್ಧಿ ವಿಷಯವನ್ನು ಈ ಕೋರ್ಸ್ ಒಳಗೊಂಡಿದ್ದು, ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ. ವಿವಿಧ ವಿಷಯ ತಜ್ಞರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲಿದ್ದಾರೆ. ಉದ್ಯೋಗದ ದೃಷ್ಟಿಯಿಂದ ಹೆಚ್ಚಾಗಿ ಆಳವಾದ ಅಧ್ಯಯನ ಹಾಗೂ ಸಂಶೋಧನೆಗಳಿಗೆ ಈ ಶಿಕ್ಷಣ ನೆರವಾಗಲಿದೆ. ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನೇಮಕಾತಿ ಸಂದರ್ಭ ಈ ಕೋರ್ಸ್ ಪೂರೈಸಿದವರಿಗೆ ಆದ್ಯತೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅದಕ್ಕೆ ಉತ್ತಮ ಸ್ಪಂದನೆಯೂ ಸಿಕ್ಕಿದೆ. ಅಂತೆಯೇ ಸರ್ಕಾರದ ವಿವಿಧ ಇಲಾಖೆಗಳಲ್ಲೂ ಗ್ರಾಮೀಣಾಭಿವೃದ್ಧಿಯಲ್ಲಿ ಎಂಬಿಎ ಪದವಿ ಪಡೆದವರಿಗೆ ಅವಕಾಶ ನೀಡುವಂತೆ ಕೋರಲಾಗಿದೆ’ ಎಂದು ಅವರು ತಿಳಿಸಿದರು.
‘ತಿಂಗಳ ಅತಿಥಿ’ ಸಂವಾದ: ಜಾನಪದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮತ್ತೊಂದು ಕಾರ್ಯಕ್ರಮ ವಿ.ವಿ. ಅಂಗಳದಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿದೆ. ತಿಂಗಳಿಗೆ ಒಮ್ಮೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಲಾವಿದರು, ವಿಷಯ ತಜ್ಞರು ಹಾಗೂ ಸಾಹಿತಿಗಳನ್ನು ಆಹ್ವಾನಿಸಲಾಗುತ್ತಿದೆ. ಅತಿಥಿಗಳ ಜೊತೆ ಮುಕ್ತ ಸಂವಾದವೂ ನಡೆಯುತ್ತಿದೆ.
ಈವರೆಗೆ ಇಂತಹ ಒಟ್ಟು 13 ‘ಪಟ್ಟಾಂಗ’ಗಳು ನಡೆದಿವೆ. ಜಾನಪದ ಸಂಶೋಧಕ ಡಾ. ಪಿ.ಕೆ. ರಾಜಶೇಖರ, ಯಕ್ಷಗಾನ ಭಾಗವತರಾದ ವಿದ್ವಾನ್ ಕ.ನ. ದಾಸಾಚಾರ್, ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಬುರ್ರಕಥಾ ಜಯಮ್ಮ, ಹಿಂದೂಸ್ತಾನಿ ಗಾಯಕ ಉಸ್ತಾದ್ ಹುಮಾಯುನ್ ಹರ್ಲಾಪುರ, ಬೆಳಗಲು ವೀರಣ್ಣ, ಶಿವನಗೌಡ್ರ, ಜೋಗತಿ ಮಂಜಮ್ಮ, ಕಲಾವಿದ ಸೋಮಣ್ಣ ಚಿತ್ರಗಾರ, ಜಾನಪದ ವೈದ್ಯ ಗುರುಶಾಂತಪ್ಪ ಅವರು ಈವರೆಗೆ ಈ ಅತಿಥಿ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಲಾವಿದರ ಕುರಿತಾದ ಕಿರುಹೊತ್ತಿಗೆಯನ್ನು ತರುವ ಯೋಜನೆಯನ್ನು ವಿವಿ ಹೊಂದಿದೆ.
ವಿಚಾರ ಸಂಕಿರಣ 18, 19ರಂದು
ಜಾನಪದ ವಿಶ್ವವಿದ್ಯಾಲಯದ ಅಂಗಳವು ಕಲಿಕೆಯ ಜೊತೆಗೆ ವಿಷಯಗಳ ಮಂಥನಕ್ಕೊಂದು ವೇದಿಕೆಯೂ ಆಗುತ್ತಿದೆ. ಜನವರಿ 18 ಹಾಗೂ 19ರಂದು ಅಂತಹದ್ದೊಂದು ವಿಚಾರ ಸಂಕಿರಣವು ವಿಶ್ವವಿದ್ಯಾಲಯದ ಅಂಗಳದಲ್ಲಿ ನಡೆಯಲಿದೆ.
ದಕ್ಷಿಣ ಭಾರತೀಯ ಭಾಷೆಗಳ ಸಂಘದ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಭಾಷಾ ತಜ್ಞರು, ಜಾನಪದ ತಜ್ಞರು ಪಾಲ್ಗೊಳ್ಳಲಿದ್ದಾರೆ.
‘ಭಾಷೆ ಹಾಗೂ ಜಾನಪದಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಚರ್ಚೆ ನಡೆಸಿ ಅದಕ್ಕೊಂದು ಸೈದ್ಧಾಂತಿಕ ರೂಪ ನೀಡುವ ನಿಟ್ಟಿಯಲ್ಲಿ ಪ್ರಯತ್ನ ನಡೆಯಲಿದೆ’ ಎನ್ನುತ್ತಾರೆ ಕುಲಪತಿಗಳು.
ಪ್ರತಿ ವಿಶ್ವವಿದ್ಯಾಲಯವು ಒಂದು ವರ್ಷದಲ್ಲಿ ಮೂರು ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸಬೇಕಾಗುತ್ತದೆ. ಹೀಗಾಗಿ ಮುಂಬರುವ ಮಾರ್ಚ್ನ ಒಳಗೆ ಜಾನಪದ ವಿ.ವಿ.ಯಲ್ಲೂ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.