ಬೆಂಗಳೂರು: ಬಿಬಿಎಂಪಿಯ ಎಲ್ಲ ವಲಯಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಹೊಸದಾಗಿ ಟೆಂಡರ್ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಕೆಲವು ವಾರ್ಡ್ಗಳಲ್ಲಿ ಹೆಚ್ಚುವರಿ ಪಾಳಿ ಹಾಗೂ ಶೂನ್ಯ ತ್ಯಾಜ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡಲಾಗಿದ್ದ ಗುತ್ತಿಗೆಯನ್ನು ಇದೇ 25ರಿಂದ ಅನ್ವಯವಾಗುವಂತೆ ಹಿಂಪಡೆಯಲು ಪಾಲಿಕೆ ಆಯುಕ್ತ ಎಂ.ಕೆ. ಶಂಕಲಿಂಗೇಗೌಡ ಆದೇಶ ಹೊರಡಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಹೆಚ್ಚುವರಿ ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವವರ ಸೇವೆ ಹಾಗೂ ಶೂನ್ಯ ತ್ಯಾಜ್ಯ ಯೋಜನೆಯಡಿ ಹೆಚ್ಚುವರಿ ಕಸ ಸಂಗ್ರಹಣೆ, ವಿಲೇವಾರಿಗೆಂದು ನೀಡಿದ್ದ ಗುತ್ತಿಗೆ ಅವಧಿ ಇದೇ 25ಕ್ಕೆ ಕೊನೆಗೊಳ್ಳಲಿದೆ. ಇನ್ನು ಮುಂದೆ ಹೆಚ್ಚುವರಿಯಾಗಿ ಪೌರ ಕಾರ್ಮಿಕರು ಮತ್ತು ವಾಹನಗಳನ್ನು ನಿಯೋಜಿಸುವ ಬಗ್ಗೆ ಪ್ರಸ್ತಾವ ಸಲ್ಲಿಸುವ ಬದಲು ಹಾಲಿ ಸಿಬ್ಬಂದಿ ಹಾಗೂ ವಾಹನಗಳನ್ನೇ ಬಳಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.