ಬೆಂಗಳೂರು: ‘ನನ್ನ ವಿರುದ್ಧ ಯಾವುದೇ ಹಗರಣಗಳ ಬಗ್ಗೆ ದಾಖಲೆಗಳಿದ್ದರೂ ಅವೆಲ್ಲವನ್ನೂ ವಿಧಾನಮಂಡಲದಲ್ಲಿ ಮುಕ್ತವಾಗಿ ಚರ್ಚಿಸಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಪಕ್ಷದ ನಾಯಕರಿಗೆ ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ.
‘ಕಳೆದ ಅಧಿವೇಶನ ಕೂಡ ಯಾವುದೇ ಚರ್ಚೆ ಇಲ್ಲದೆ ಮುಗಿಯಿತು. ಆ ರೀತಿ ಆಗುವುದು ಬೇಡ. ಯಾವುದೇ ದಾಖಲೆಗಳಿದ್ದರೂ ಅವೆಲ್ಲವನ್ನೂ ತಂದು ಚರ್ಚಿಸಿ. ಬದಲಿಗೆ, ಬರೇ ಗಲಾಟೆ ಬೇಡ’ ಎಂದು ಹೇಳಿದರು.
‘ಸೇಡಿನ ರಾಜಕಾರಣ ಬೇಡ ಎನ್ನುವ ಕಾರಣಕ್ಕೆ ನಾನು ಇದುವರೆಗೂ ಸುಮ್ಮನಿದ್ದೆ. ಇದನ್ನೇ ಅಪ್ಪ-ಮಕ್ಕಳು (ಎಚ್.ಡಿ.ದೇವೇಗೌಡ ಮತ್ತು ಮಕ್ಕಳು) ನನ್ನ ದೌರ್ಬಲ್ಯ ಅಂದುಕೊಂಡಿದ್ದಾರೆ. ನನ್ನ ಬಳಿಯೂ ಅವರ ವಿರುದ್ಧದ ನೂರಾರು ದಾಖಲೆಗಳಿವೆ. ಅವೆಲ್ಲವನ್ನೂ ನಾನು ಸದನದಲ್ಲಿ ಪ್ರಸ್ತಾಪಿಸುತ್ತೇನೆ’ ಎಂದು ನುಡಿದರು.
‘ಹಗರಣಗಳ ಕುರಿತು ಸಾರ್ವಜನಿಕ ಚರ್ಚೆಗೆ ಬನ್ನಿ ಎಂದಿದ್ದೆ. ಈಗ ಹೋಗಲಿ ಸದನದಲ್ಲೇ ಸರಿಯಾಗಿ ಚರ್ಚೆ ಮಾಡಲಿ ಎಂದು ಮತ್ತೊಮ್ಮೆ ಆಹ್ವಾನ ನೀಡುತ್ತಿದ್ದೇನೆ’ ಎಂದು ಹೇಳಿದರು.