ಕನಕಗಿರಿ: ಇಲ್ಲಿಗೆ ಸಮೀಪದ ನವಲಿ ಗ್ರಾಮದ ಎಂಎಚ್ಪಿಎಸ್ ಶಾಲೆಯ ಶಿಕ್ಷಕ ಹುದ್ದೆಗೆ ನೇಮಕವಾಗಿರುವ ಹಾಗೂ ಸದ್ಯ ಬುದ್ದ ವೃತ್ತದ ಪ್ರಾಥಮಿಕ ಶಾಲೆಗೆ ನಿಯೋಜನೆಗೊಂಡಿರುವ ಶಿಕ್ಷಕ ನರಹರಿ ಚಳ್ಳೂರು ಹದಿನೈದು ವರ್ಷಗಳಿಂದಲೂ ಇದೇ ಗ್ರಾಮದಲ್ಲಿ ಸೇವೆ ಸ್ಲ್ಲಲಿಸುತ್ತಿದ್ದಾರೆ.
2010ರಲ್ಲಿ ಆರಂಭವಾದ ಬುದ್ದ ವೃತ್ತದ ಶಾಲೆ ಮೊದಲಿಗೆ ಬಾಡಿಗೆ ಮನೆಯಲ್ಲಿ ನಡೆಯುತ್ತಿತ್ತು. ಚಳ್ಳೂರು ಅವರ ಗ್ರಾಮಸ್ಥರ ಸಹಾಯದಿಂದ ಭೂದಾನ ಪಡೆದು ಎರಡು ಶಾಲಾ ಕೊಠಡಿ, ಶೌಚಾಲಯ, ಬಿಸಿಯೂಟ ಕಟ್ಟಡ ನಿರ್ಮಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ.
ಕಲಿಕಾ ಉಪಕರಣಗಳನ್ನು ಬಳಸಿ ಬೋಧನೆಯಲ್ಲಿ ತೊಡಗಿಸಿಕೊಂಡಿರುವ ಚಳ್ಳೂರರ ಕೆಲಸ ಮೆಚ್ಚಿ 2001ರಲ್ಲಿ ಗ್ರಾಮ ಪಂಚಾಯಿತಿ `ಜನ ಮೆಚ್ಚಿದ ಶಿಕ್ಷಕ', ನೆಹರೂ ಶಿಕ್ಷಣ ಸಂಸ್ಥೆ ಸಹ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿವೆ. ಶಾಲೆಯಲ್ಲಿ ಗಿಡಮರಗಳನ್ನು ಬೆಳೆಸುತ್ತಿರುವ, ಬಿಸಿಯೂಟಕ್ಕೆ ಪೂರಕವಾಗುವಂತೆ ಶಾಲಾ ಆವರಣದಲ್ಲಿ ತರಕಾರಿ ಬೆಳೆ ಬಿತ್ತನೆ ಕೈಗೊಂಡಿರುವ ಚಳ್ಳೂರರ ಸೇವೆ ಸ್ಮರಣೀಯ ಎಂದು ನವಲಿ ತಾಂಡದ ಶಿಕ್ಷಕ ಮಹಾಂತೇಶ, ಸೋಮನಾಳ ಕ್ಯಾಂಪ್ನ ಶಿಕ್ಷಕ ರಮೇಶ ಕಂಬಳಿ ಹೇಳುತ್ತಾರೆ.
ಬಲಾಢ್ಯ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಯುವಕರ ಶ್ರಮ ಬೇಕು. ಇಂಥವರನ್ನು ರೂಪಿಸುವಲ್ಲಿ ಪ್ರಾಥಮಿಕ ಶಿಕ್ಷಣವೆ ಮೂಲ ಬುನಾದಿ. ಶಿಕ್ಷಕರ ಉತ್ತಮ ಬೋಧನೆಯಿಂದ ಇದು ಸಾಧ್ಯವಿದೆ ಎನ್ನುವುದು ನರಹರಿ ಚಳ್ಳೂರು ಅವರ ಅನಿಸಿಕೆ.