ಸಹಸ್ರನಾಮ ಅರ್ಚನೆ, ಮಂಗಳಾರತಿಯ ಬಳಿಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ನಸುಕಿನ 5.30ರಿಂದ ರಾತ್ರಿಯವರೆಗೆ ದೇವಿಯ ದರ್ಶನ ಪಡೆದರು.
ದೇವಸ್ಥಾನವನ್ನು ಗರುಡ ಕಂಬದಿಂದ ಗರ್ಭಗುಡಿಯವರೆಗೆ ವಿವಿಧ ಬಗೆಯ ಹೂ, ದಾಳಿಂಬೆ ಹಣ್ಣುಗಳಿಂದ ಅಲಂಕರಿಸಲಾಗಿತ್ತು. ದೇವಿಯ ಪೂಜೆಗಾಗಿ ಭಕ್ತರು ಗುರುವಾರ ರಾತ್ರಿಯಿಂದಲೇ ಬೆಟ್ಟಕ್ಕೆ ಆಗಮಿಸಿದ್ದರು. ದೇವಿಗೆ ಹರಕೆ ಸಲ್ಲಿಸುವ ಭಕ್ತರು ಮೆಟ್ಟಿಲು ಹತ್ತಿ ಬೆಟ್ಟಕ್ಕೆ ಬಂದರು. ವಿಶೇಷ, ನೇರ ಹಾಗೂ ಸಾಮಾನ್ಯ ಪ್ರವೇಶ ದ್ವಾರದ ಮೂಲಕ ದೇವಾಲಯ ಪ್ರವೇಶಿಸಿ, ಪೂಜೆ ಸಲ್ಲಿಸಿದರು.
ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸೀರೆ, ಕುಪ್ಪಸ ಅರ್ಪಿಸಿ, ಹೂ, ಕುಂಕುಮ, ಲಾಡು ಪ್ರಸಾದ ಪಡೆದರು. ಬೆಟ್ಟಕ್ಕೆ ಆಗಮಿಸುವ ಭಕ್ತರಿಗಾಗಿ ನಗರ ಸಾರಿಗೆ ಸಂಸ್ಥೆ ಬೆಳಗಿನ ಜಾವ 3 ಗಂಟೆಯಿಂದಲೇ ಬಸ್ ಸೌಲಭ್ಯ ಕಲ್ಪಿಸಿತ್ತು. ಬೆಟ್ಟದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಬಾರಿಯೂ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿತ್ತು.