ಚಿಕ್ಕಬಳ್ಳಾಪುರ: ನಗರದೆಲ್ಲೆಡೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ವೈವಿಧ್ಯಮಯ ಗಣೇಶನ ಮೂರ್ತಿಗಳನ್ನು ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದೆ.
ಒಂದೊಂದು ಕಡೆ ಒಂದೊಂದು ರೀತಿ ಅಲಂಕಾರ ಮಾಡಿದ್ದು, ಮೂರ್ತಿ ಪ್ರತಿಷ್ಠಾಪಿಸಿರುವ ಆವರಣ ಅಥವಾ ಮಂಟಪವನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ.
ನಗರದಲ್ಲೇ ದೊಡ್ಡ ಗಣಪ: ವಾಪಸಂದ್ರ ಬಡಾವಣೆಯಲ್ಲಿ ನಗರದಲ್ಲೇ ಬೃಹತ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸುಮಾರು 13 ಅಡಿ ಎತ್ತರದ ಈ ಮೂರ್ತಿಯನ್ನು ಹೈದರಾಬಾದ್ನಿಂದ ತರಲಾಗಿದ್ದು, 55 ಸಾವಿರ ರೂಪಾಯಿಗೆ ಖರೀದಿಸಲಾಗಿದೆ. ಮಣ್ಣಿನಿಂದ ನಿರ್ಮಿಸಿರುವ ಈ ಮೂರ್ತಿಯಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ವಿದ್ಯಾಗಣಪತಿ ಕನ್ನಡಾಂಬೆ ಗೆಳೆಯರ ಸಂಘದ ಸದಸ್ಯರು ಹೇಳುತ್ತಾರೆ.
ನಾವು ಹಲವಾರು ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಿದ್ದೇವೆ. ಪ್ರತಿ ಬಾರಿಯೂ ಒಂದಿಲ್ಲೊಂದು ವಿಶೇಷದೊಂದಿಗೆ ಆಚರಿಸುತ್ತೇವೆ. 13 ಅಡಿ ಎತ್ತರದ ಈ ಮೂರ್ತಿಯ ಒಟ್ಟು ತೂಕ 780 ಕೆ.ಜಿ. ನಗರ ಮತ್ತು ತಾಲ್ಲೂಕಿನಲ್ಲೇ ಯಾರ ಬಳಿಯೂ ಇಂತಹ ಮೂರ್ತಿಯಿಲ್ಲ ಎಂದು ಸಂಘದ ಸದಸ್ಯರು ಹೇಳುತ್ತಾರೆ.
ಪ್ರವಾಹದ ನೆನಪು: ಉತ್ತರಾಖಂಡ ಸಮೀಪದ ಕೇದಾರನಾಥದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ನೆನಪಿಸುವಂತಹ ದೃಶ್ಯವನ್ನು ಗಂಗಮ್ಮಗುಡಿಯ ಓಂಕಾರ ಗಣಪತಿ ಯುವಕರ ಸಂಘದ ಸದಸ್ಯರು ಸಿದ್ಧಪಡಿಸಿದ್ದಾರೆ.
ಗಂಗಮ್ಮಗುಡಿಯ ಆವರಣದಲ್ಲಿರುವ ಜಾಲಾರಿ ಗಂಗಾಂಭ ದೇಗುಲದ ಆವರಣದಲ್ಲಿ ಪ್ರವಾಹದ ದೃಶ್ಯ ನೆನಪಿಸುವಂತಹ ವ್ಯವಸ್ಥೆ ಮಾಡಿದ್ದಾರೆ. ಬೆಟ್ಟ–ಗುಡ್ಡ ಮತ್ತು ಪರ್ವತಗಳ ಮಧ್ಯೆ ಇರುವ ದೇಗುಲವೊಂದು ಕುಸಿದುಬೀಳುವ ಸ್ಥಿತಿಯಲ್ಲಿದೆ. ಶಿವನ ಲಿಂಗ ಮಾಡಲಾಗಿದ್ದು, ಪ್ರವಾಹ ತಡೆಯುವಂತೆ ಮತ್ತು ಜನರನ್ನು ರಕ್ಷಿಸುವಂತೆ ಗಣೇಶನು ಶಿವನ ಬಳಿ ಪ್ರಾರ್ಥಿಸುವಂತೆ ಕಾಣಿಸುತ್ತದೆ.
ಚಾಮರಾಜಪೇಟೆ ಗಣೇಶ: ಚಾಮರಾಜಪೇಟೆಯ ಸ್ನೇಹಿತರು ಜತೆಗೂಡಿ ಮಂಟಪ ನಿರ್ಮಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಬೆಸ್ಕಾಂ ಕಚೇರಿ ಹಿಂಭಾಗದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ವಿಶೇಷ ಪೂಜೆ ಮತ್ತು ಪ್ರಾರ್ಥನೆ ಮಾಡಲಾಗುತ್ತಿದೆ. ಬಾಲಕೃಷ್ಣ ಎಂಬುವರು ಥರ್ಮಕೋಲ್ ಮಂಟಪ ನಿರ್ಮಿಸಿದ್ದು, 16 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ.
ಮಂಟಪಕ್ಕೆಂದೇ ಬಂಗಾರದ ಲೇಪನ ನೀಡಿ, ಇನ್ನಷ್ಟು ಆಕರ್ಷಣೀಯಗೊಳಿಸಿದ್ದಾರೆ. ಒಂದು ತಿಂಗಳಿನಿಂದ ಈ ಕಾರ್ಯ ನಡೆದಿದ್ದು, ಜನರನ್ನು ಆಕರ್ಷಿಸುತ್ತಿದೆ. ಸ್ನೇಹಿತರಾದ ನವೀನ್, ಗಿರಿ, ಅಜಯ್, ಕುಮಾರ್, ಬಿ.ವಿ.ಶ್ರೇಯಸ್, ಅನಿಲ್, ಮಹೇಶ್ ಮುಂತಾದವರು ಬಾಲಕೃಷ್ಣ ಅವರಿಗೆ ಸಹಾಯ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.