ಚಿಕ್ಕೋಡಿ: ತಾಲ್ಲೂಕಿನಲ್ಲಿ ಗುರುವಾರ ಕೃಷ್ಣಾ ನದಿ ಹರಿವಿನಲ್ಲಿ ಯಥಾಸ್ಥಿತಿ ಮುಂದುವರೆದರೆ, ಉಪನದಿಗಳಾದ ದೂಧಗಂಗಾ, ವೇದಗಂಗಾ ನದಿಗಳ ಹರಿವಿನಲ್ಲಿ ಸುಮಾರು ಒಂದುವರೆ ಅಡಿಯಷ್ಟು ಇಳಿಮುಖವಾಗಿದೆ. ಜಲಾವೃತಗೊಂಡಿದ್ದ ಜತ್ರಾಟ-ಭೀವಶಿ ಸೇತುವೆ ಗುರುವಾರ ಸಂಜೆ ಸಂಚಾರಕ್ಕೆ ಮುಕ್ತಗೊಂಡಿದೆ.
ತಾಲ್ಲೂಕಿನ ಕಲ್ಲೋಳ ಮತ್ತು ಯಡೂರ ಗ್ರಾಮಗಳ ಮಧ್ಯೆ ಇರುವ ಸೇತುವೆ ಕಳೆದೊಂದು ವಾರದಿಂದಲೂ ಮುಳುಗಡೆ ಸ್ಥಿತಿಯಲ್ಲಿಯೇ ಇದೆ. ಇದರಿಂದ ಈ ಸೇತುವೆ ಮೇಲಿಂದ ಸಾರಿಗೆ ಸಂಚಾರ ಇನ್ನೂ ಸ್ಥಗಿತಗೊಂಡಿದೆ.
ಗುರುವಾರ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ದಲ್ಲಿ ಕೊಂಚ ಏರಿಕೆ ದಾಖಲಾಗಿದೆ.
ಬುಧವಾರ ರಾಜಾಪುರ ಸೇರಿದಂತೆ ವಿವಿಧ ಬ್ಯಾರೇಜ್ಗಳಿಂದ 75,253 ಕ್ಯೂಸೆಕ್ ನೀರಿನ ಪ್ರಮಾಣ ಗುರುವಾರ 73,944 ಕ್ಯೂಸೆಕ್ಗೆ ಏರಿಕೆಯಾಗಿದೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಮಳೆಯ ಅಬ್ಬರ ತಗ್ಗಿದೆ. ಕೊಯ್ನಾದಲ್ಲಿ 44ಮಿಮಿ, ನವಜಾ -101ಮಿಮಿ, ಮಹಾ ಬಳೇಶ್ವರ- 93ಮಿಮಿ, ವಾರಣಾ-35 ಮಿಮಿ ಮಳೆ ದಾಖಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.