‘ಚಿಗಟೇರಿ ಗ್ರಾಮದಲ್ಲಿ ದಂಗೆ ಎದ್ದ ಮಕ್ಕಳು’ (ಪ್ರ.ವಾ. ಫೆ. 27) ವರದಿಯನ್ನು ಪ್ರಕಟವಾದ ಮಕ್ಕಳ ದಿಟ್ಟ ಹೋರಾಟಕ್ಕೆ ಮನ್ನಣೆ ಹಾಗೂ ರಾಜ್ಯ ವ್ಯಾಪಿ ಪ್ರಚಾರ ನೀಡಿದ್ದಕ್ಕೆ ಪ್ರಜಾವಾಣಿಗೆ ವಂದನೆಗಳು. ಪ್ರಾಥಮಿಕ ಶಾಲಾ ಮಕ್ಕಳೇ ತಮ್ಮ ಸಹಪಾಠಿಯ ಬಾಲ್ಯವಿವಾಹವನ್ನು ತಡೆದು, ಹಿರಿಯರಿಗೆ ಹಾಗೂ ವಿದ್ಯಾವಂತರಿಗೆ ಬುದ್ಧಿ ಹೇಳಿ ಮಾದರಿಯಾಗಿರುವುದು ಶ್ಲಾಘನೀಯ. ಅವರು ತಡೆದು ನಿಲ್ಲಿಸಿದ್ದು ಒಂದು ಮದುವೆಯನ್ನು ಮಾತ್ರವಲ್ಲ, ಬಾಲ್ಯದಲ್ಲೇ ಮುರುಟಿ ಹೋಗುತ್ತಿದ್ದ ಒಂದು ಎಳೆಯ ಜೀವದ ಬದುಕನ್ನೂ ಮತ್ತೆ ಕಟ್ಟಿಕೊಟ್ಟಿದ್ದಾರೆ. ಪುಟ್ಟ ಮಕ್ಕಳ ಈ ದಿಟ್ಟ ಹೋರಾಟಕ್ಕೆ ಅಭಿನಂದನೆಗಳು.
ಯೂನಿಸೆಫ್ನ ವರದಿಯಂತೆ ಗ್ರಾಮೀಣ ಭಾರತದಲ್ಲಿ ಶೇ 56 ಕ್ಕಿಂತಾ ಹೆಚ್ಚು ಹೆಣ್ಣುಮಕ್ಕಳ ಮದುವೆ ಅಪ್ರಾಪ್ತ ವಯಸ್ಸಿನಲ್ಲೇ ಆಗುತ್ತದೆ. ಈ ಜ್ವಲಂತ ಸಮಸ್ಯೆಯನ್ನು ಎದುರಿಸಲೆಂದೇ ಹೋದ ವರ್ಷದ ನವೆಂಬರ್ 20ರಂದು ಆಚರಿಸಲಾದ ವಿಶ್ವ ಮಕ್ಕಳ ದಿನಾಚರಣೆಯನ್ನು ‘ಬಾಲ್ಯ ವಿವಾಹ ತಡೆಗಟ್ಟಿ’ ಎಂಬ ಘೋಷಣೆಯಡಿಯಲ್ಲೇ ಆಚರಿಸಬೇಕೆಂದು ವಿಶ್ವಸಂಸ್ಥೆ ಮನವಿ ಮಾಡಿತ್ತು ಎಂಬುದನ್ನಿಲ್ಲಿ ನೆನಪಿಸಿಕೊಳ್ಳಬಹುದು. ಚಿಗಟೇರಿಯ ಮಕ್ಕಳು ನಡೆಸಿದ ಪ್ರತಿಭಟನೆ ಹಾಗೂ ಪೋಷಕರಿಗೆ ಅವರು ತಿಳಿಹೇಳಿದ ಬಗೆಯನ್ನು ಪ್ರತಿ ಶಾಲೆಯಲ್ಲಿಯೂ ಶಿಕ್ಷಕರು ಮಕ್ಕಳಿಗೆ ತಿಳಿಸಿ ಹೇಳುವ ಮೂಲಕ ಅವರಲ್ಲಿಯೂ ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ಕುರಿತು ಅರಿವು ಮೂಡಿಸಬೇಕು