ಯಲಹಂಕದ ಮಾರುತಿ ಬಡಾವಣೆಯಲಿ ಪಂಚಾಮೃತ ಸುಗಮ ಸಂಗೀತ ಶಾಲೆ ಆಯೋಜಿಸಿದ್ದ ಇಂಚರ ಕಾರ್ಯಕ್ರಮದಲ್ಲಿ ಚಿಣ್ಣರ ಗಾಯನ ಪ್ರೇಕ್ಷಕರನ್ನು ಮುದಗೊಳಿಸಿತು.
ಪ್ರಥಮಾ ಪಿ.ದೀಕ್ಷಿತ್ ಹಾಡಿದ `ವಿಘ್ನೇಶ್ವರ ವಿನಾಯಕ~ನ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ `ಬಂದಾನೋ ಬಂದ ಸವಾರ~ (ಬಿ.ವಿ. ಕಾರಂತರ ರಂಗಗೀತೆ), `ನೀರಿಗೆ ನೈದಿಲೆ ಶೃಂಗಾರ~ (ವಚನ), ದ.ರಾ.ಬೇಂದ್ರೆ ಅವರ `ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ~ ಹಾಗೂ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.
ಪ್ರಿಯಾಂಶು ಹಾಡಿದ `ಅಮ್ಮ ಬೇಕೇ ಬೇಕು ನಂಗೆ ಚಂದ್ರ ಆಡೋಕೆ~ (ಎಚ್.ಎಸ್. ವೆಂಕಟೇಶಮೂರ್ತಿ), `ಚೆಲುವು ನೋಡಮ್ಮ ಚೆಲುವು~ ಭಕ್ತಿ ಗೀತೆಗಳ ಗಾಯನ ಶ್ರೋತೃವರ್ಗವನ್ನು ಮಂತ್ರಮುಗ್ಧಗೊಳಿಸಿತು.
ಹಿರಿಯ ಗಾಯಕಿ ಕೆ.ಎನ್. ಜಯಂತಿ ಅವರು ಹಾಡಿದ ಕೆಲ ಗೀತೆಗಳು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತಂದಿತು.ಅಭಿಜಿತ್ (ಹಾರ್ಮೋನಿಯಂ), ಗುರುನಂದನ್ (ತಬಲಾ), ವಿಶೇಷ ಲಯವಾದ್ಯದಲ್ಲಿ ರವಿ ಸಹಕರಿಸಿದರು.