ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಚಿತ್ರೋದ್ಯಮದಿಂದ ಸಾಕಷ್ಟು ಆದಾಯ'

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು: `ಚಿತ್ರೋದ್ಯಮದಿಂದ ಸರ್ಕಾರಕ್ಕೆ ಸಾಕಷ್ಟು ಆದಾಯ ಬರುತ್ತಿದ್ದು, ಚಲನ ಚಿತ್ರಗಳ ಮಾಲೀಕರ ಹಿತಕಾಯಲು ಬೌದ್ಧಿಕ ಹಕ್ಕುಸ್ವಾಮ್ಯ ಕಾಯ್ದೆಯು ನೆರವಾಗಲಿದೆ' ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾ ಖೆಯ ಹಕ್ಕುಸ್ವಾಮ್ಯ ವಿಭಾಗದ ನಿರ್ದೇ ಶಕ ಜಿ.ಆರ್.ರಾಘವೇಂದ್ರ ಹೇಳಿದರು.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ `ಚಲನ ಚಿತ್ರ ಮತ್ತು ಶಬ್ದಗ್ರಹಣದ ಹಕ್ಕು ಸ್ವಾಮ್ಯದ ವಿಚಾರಗಳು' ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಚಿತ್ರೋದ್ಯಮದಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಚಲನಚಿತ್ರಗಳ ನಕಲು (ಪೈರಸಿ) ನಡೆದರೆ ಅದರಿಂದ ಚಿತ್ರಗಳ ಒಡೆತನದ ಹಕ್ಕು ಪಡೆದಿರುವ ಮಾಲೀಕರಿಗೆ ಮಾತ್ರವಲ್ಲ, ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗಲಿದೆ. ಹೀಗಾಗಿ ಪೈರಸಿ ತಡೆಯಲು ಬೌದ್ಧಿಕ ಹಕ್ಕುಸ್ವಾಮ್ಯ ಕಾಯ್ದೆ ಸಹಕಾರಿಯಾಗ ಲಿದೆ' ಎಂದು ಅವರು ಹೇಳಿದರು.

`ಬೌದ್ಧಿಕ ಹಕ್ಕುಸ್ವಾಮ್ಯ ಕಾಯ್ದೆಯ ಅಡಿಯಲ್ಲಿ ಚಲನಚಿತ್ರಗಳ ಮಾಲೀಕತ್ವ, ಗೌರವಧನದ ಪರಿಮಿತಿ ಹಾಗೂ ಹಕ್ಕುಸ್ವಾಮ್ಯದ ವರ್ಗಾವಣೆಯ ಬಗ್ಗೆ ಅಧಿನಿಯಮಗಳನ್ನು ರೂಪಿಸಲಾಗಿದೆ. ಚಲನಚಿತ್ರ ಸೇರಿದಂತೆ ಯಾವುದೇ ಕೃತಿಯ ಹಕ್ಕುಸ್ವಾಮ್ಯವನ್ನು ವರ್ಗಾವಣೆ ಮಾಡಲು ಕಾಯ್ದೆಯಡಿ ಅವಕಾಶವಿದೆ' ಎಂದು ಅವರು ತಿಳಿಸಿದರು.

`ಭಾರತೀಯ ಹಕ್ಕುಸ್ವಾಮ್ಯ ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆ 1998ರಿಂದ ನಡೆಯುತ್ತಿತ್ತು. ಈ ವರ್ಷ ಕಾಯ್ದೆಗೆ ತಿದ್ದುಪಡಿ ತಂದು ಬೌದ್ಧಿಕ ಹಕ್ಕುಸ್ವಾಮ್ಯ ಕಾಯ್ದೆಯನ್ನು ಬಲಪಡಿಸಲಾಗಿದೆ. ಡಿಜಿ ಟಲ್ ಮಾಧ್ಯಮಗಳ ಹಕ್ಕು ಸ್ವಾಮ್ಯ ವನ್ನು ಕಾಯ್ದಿರಿಸುವ ಬಗ್ಗೆಯೂ ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸುವ ಚಿಂತನೆ ನಡೆದಿದೆ' ಎಂದರು.

ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡಿ, `ಚಲನಚಿತ್ರ ನಿರ್ಮಾಣ ಒಬ್ಬ ವ್ಯಕ್ತಿಯ ಕೆಲಸವಲ್ಲ. ಅದು ಸಾಮೂಹಿಕ ಪ್ರಯತ್ನ. ಹೀಗಾಗಿ ಚಲನಚಿತ್ರದ ಹೆಸರಿನಿಂದ ಹಿಡಿದು ಹಿನ್ನೆಲೆ ಸಂಗೀತದವರೆಗೂ ಹಕ್ಕು ಸ್ವಾಮ್ಯದ ವಿಷಯದಲ್ಲಿ ಗೊಂದಲವಿದೆ' ಎಂದರು.

`ಚಲನಚಿತ್ರದ ಹೆಸರಿನ ಒಡೆತನಕ್ಕೆ ಸಂಬಂಧಿಸಿದಂತೆಯೇ ಹಲವು ವಿವಾದ ಗಳು ಉಂಟಾಗುತ್ತವೆ. ಒಂದು ಭಾಷೆಯ ಚಿತ್ರಕ್ಕೆ ಇಟ್ಟ ಹೆಸರು, ಮತ್ತೊಂದು ಚಿತ್ರಕ್ಕೆ ಇಟ್ಟ ಹೆಸರು ಒಂದೇ ಆಗಿದ್ದರೆ ಅಂತಹ ಸಂದರ್ಭದಲ್ಲಿ ಆ ಹೆಸರಿನ ಹಕ್ಕುಸ್ವಾಮ್ಯ ಯಾರದ್ದು ಎಂಬ ಗೊಂದಲಗಳು ಉಂಟಾಗುತ್ತವೆ. ಒಂದು ಚಿತ್ರದ ಸಂಗೀತದ ತುಣುಕು ಮತ್ತೊಂದು ಚಿತ್ರದಲ್ಲಿ ಬಳಕೆಯಾಗಿರು ವಂತೆ ಭಾಸವಾಗುತ್ತದೆ. ಇಂತಹ ಸಂದರ್ಭದಲ್ಲಿ ಹಕ್ಕುಸ್ವಾಮ್ಯದ ಪರಿ ಮಿತಿಗಳನ್ನು ಗುರುತಿಸುವುದು ಕಷ್ಟ ಸಾಧ್ಯ' ಎಂದು  ಅಭಿಪ್ರಾಯ ಪಟ್ಟರು.

ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ನಿರ್ದೇಶಕ ಎಸ್. ಎಂ.ಜಮಖಂಡಿ ಮಾತನಾಡಿ, `ಆರ್ಥಿಕ ವಲಯಕ್ಕೆ ಚಲನಚಿತ್ರ ಕ್ಷೇತ್ರದ ಕೊಡುಗೆ ಹೆಚ್ಚಾಗಿದೆ. ಆದರೆ, ಚಲನಚಿತ್ರಗಳ ಹಕ್ಕುಸ್ವಾಮ್ಯದ ಬಗ್ಗೆ ನಮ್ಮಲ್ಲಿ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಬೌದ್ಧಿಕ ಹಕ್ಕುಸ್ವಾಮ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT