ಬಾಣಾವರ: ಪಟ್ಟಣದ ಗುರುಕುಲ ಶಾಲೆಯ ಹತ್ತಿರದ ಮಾವಿನ ತೋಪಿನಲ್ಲಿ ಕಂಡುಬಂದಿರುವ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬೋನುಗಳನ್ನು ಇಟ್ಟು ಕಾಯುತ್ತಿದ್ದಾರೆ.
ಈಚೆಗೆ ಎರಡು ಚಿರತೆಗಳು ಕಂಡು ಬಂದಿವೆ ಎಂದು ಸುದ್ದಿಯಾಗಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹೆಜ್ಜೆ ಗುರುತು ಆಧರಿಸಿ ಚಿರತೆಯ ಇರುವಿಕೆಯನ್ನು ದೃಢಪಡಿಸಿದರು. ಬಳಿಕ ಚಿರತೆಗಳನ್ನು ಸೆರೆ ಹಿಡಿಯಲು ಕಡೂರಿನಿಂದ ಬೋನುಗಳನ್ನು ತಂದು ಕಾದು ಕುಳಿತಿದ್ದಾರೆ.
ಅರಣ್ಯ ರಕ್ಷಕ ಮಲ್ಲೇಶ್ ನಾಯ್ಕ, ಅರಣ್ಯ ವೀಕ್ಷಕ ತಿಮ್ಮೇಗೌಡ, ವನಪಾಲಕ ಅಶೋಕ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದೆ. ತೋಪಿನ ಒಳಗೆ ಚಿರತೆ ಮತ್ತು ಮರಿ ಚಿರತೆಗಳು ಸೇರಿಕೊಂಡಿವೆ ಎಂದು ಹೇಳಲಾಗಿದೆ.