ಬೆಂಗಳೂರು: ನಗರದಲ್ಲಿ ಸೋಮವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಆ ಪಕ್ಷದ ರಾಜ್ಯ ಮುಖಂಡರ ಅಭಿಪ್ರಾಯ ಇಲ್ಲಿದೆ:
ತಿನ್ನುವ ಅನ್ನದಲ್ಲೂ ಕಲ್ಲು
ಬಡವರಿಗೆ ಬೆಲೆ ಏರಿಕೆ ಬಿಸಿ ತಟ್ಟಬಾರದು ಎನ್ನುವ ಉದ್ದೇಶದಿಂದ ನಮ್ಮ ಸರ್ಕಾರ ನೀತಿ ಸಂಹಿತೆ ಜಾರಿಗೆ ಬರುವ ಮುಂಚೆಯೇ 2 ರೂಪಾಯಿಗೆ ಕೆ.ಜಿ ಅಕ್ಕಿ ನೀಡಲು ನಿರ್ಧರಿಸಿತ್ತು. ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಕಾಂಗ್ರೆಸ್, ತಿನ್ನುವ ಅನ್ನದಲ್ಲೂ ಕಲ್ಲು ಹಾಕಿದೆ. -ಆರ್. ಅಶೋಕ
ನಾವು ಗಂಡಸರು
ಶ್ರೀನಗರದ ಲಾಲ್ಚೌಕ್ನಲ್ಲಿ ತ್ರಿವರ್ಣ ಬಾವುಟ ಹಾರಿಸುವ ಮೂಲಕ ತಾಯಿಯ ಎದೆಹಾಲು ಕುಡಿದು ಬೆಳೆದ ನಾವು ಗಂಡಸರು ಎಂಬುದನ್ನು ತೋರಿಸಿದ್ದೇವೆ. ಶ್ರೀನಗರದಲ್ಲಿ ಪಾಕಿಸ್ತಾನ ಬಾವುಟ ಹಾರಿಸಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ಸಿಗರು ಯಾರು ಎನ್ನುವುದನ್ನು ಜನತೆಯೇ ತೀರ್ಮಾನ ಮಾಡಬೇಕು.
-ಕೆ.ಎಸ್. ಈಶ್ವರಪ್ಪ,
ಸ್ವಾರ್ಥಿಗಳ ಹಿಡಿತ ತಪ್ಪಿದೆ
ಬಿಜೆಪಿ ಆಡಳಿತದ ಕೊನೆಯ ಎರಡು ವರ್ಷಗಳ ಆಡಳಿತದಲ್ಲಿ ಒಂದೂ ಡಿನೋಟಿಫಿಕೇಶನ್ ಆದೇಶ ಹೊರಬಿದ್ದಿಲ್ಲ. ಕಾಂಗ್ರೆಸ್ಸಿನ ಜಿ.ಪರಮೇಶ್ವರ ಮತ್ತು ಸಿದ್ದರಾಮಯ್ಯ `ಸೀಟಿಗಾಗಿ ನೋಟು' ಪಡೆದಿದ್ದಾರೆ.
-ಡಿ.ವಿ. ಸದಾನಂದಗೌಡ
ನಾಟಕ ಮಂಡಳಿ
ಕಾಂಗ್ರೆಸ್ ಪಕ್ಷ ಎಂದರೆ ಸೋನಿಯಾ ಗಾಂಧಿ ಕೃಪಾಪೋಷಿತ ನಾಟಕ ಮಂಡಳಿ. ಬಿಜೆಪಿ, ಭಾರತ್ ಮಾತಾ ಕೀ ಜೈ ಎಂದರೆ, ಕಾಂಗ್ರೆಸ್, ಸೋನಿಯಾ ಗಾಂಧಿ ಕೀ ಜೈ ಎನ್ನುತ್ತದೆ.
-ಅನಂತಕುಮಾರ್
ಮತ್ತೆ ಅಧಿಕಾರ ಬೇಕು
ನಾನು ಕೇವಲ ಎಂಟು ತಿಂಗಳು ಮುಖ್ಯಮಂತ್ರಿ ಆಗಿದ್ದೆ. ರಾಜ್ಯದ ಪ್ರಗತಿಗೆ ಹಲವು ಯೋಜನೆ ಹಾಕಿಕೊಂಡಿದ್ದೇನೆ. ಪೂರ್ಣಾವಧಿಗಾಗಿ ನಮ್ಮ ಸರ್ಕಾರಕ್ಕೆ ಬಹುಮತ ಕೊಡಬೇಕು.
-ಜಗದೀಶ ಶೆಟ್ಟರ್
ಯಾರು ನಾಯಕ?
ಆಟ ಶುರುವಾಗಿದೆ. ನಮ್ಮ ನಾಯಕ ಜಗದೀಶ ಶೆಟ್ಟರ್. ನಿಮ್ಮ ನಾಯಕ ಯಾರು ಕಾಂಗ್ರೆಸ್ಸಿಗರೇ?
-ಪ್ರಹ್ಲಾದ ಜೋಶಿ