ಮುಜಫ್ಫರ್ನಗರ: ಇಂದು ಮರು ಮತದಾನ
ಮುಜಫ್ಫರ್ನಗರ (ಪಿಟಿಐ): ಮುಜಫ್ಫರ್ನಗರ ಜಿಲ್ಲೆಯ ಮೂರು ಮತಗಟ್ಟೆಗಳಲ್ಲಿ ಮಂಗಳವಾರ (ಮೇ 13) ಮರು ಮತದಾನ ನಡೆಯಲಿದೆ.
ಬೆಹ್ಲೋಲ್ಪುರ, ರಸೂಲ್ಪುರ ಜತ್ತನ್ ಮತ್ತು ನೂನಖೆರಾಗಳಲ್ಲಿ ಮೇ 12ರಂದು ಮರುಮತದಾನ ನಡೆಸಲು ಈ ಮೊದಲು ಸೂಚಿಸಿದ್ದ ಚುನಾವಣಾ ಆಯೋಗ, ಈಗ ಅದನ್ನು ಮೇ 13ರಂದು ನಡೆಸುವಂತೆ ನಿರ್ದೇಶನ ನೀಡಿದೆ ಎಂದು ಮುಜಫ್ಫರ್ನಗರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಇಂದರ್ಮಣಿ ತ್ರಿಪಾಠಿ ಅವರು ತಿಳಿಸಿದ್ದಾರೆ.
ಈ ಮತಗಟ್ಟೆಗಳಲ್ಲಿ ಏ.10ರಂದು ನಡೆದ ಮತದಾನದಲ್ಲಿ ಅಕ್ರಮ ನಡೆದಿದೆ. ಮತದಾರರಲ್ಲದವರಿಗೂ ಮತಚಲಾಯಿಸಲು ಅವಕಾಶ ನೀಡಲಾಗಿತ್ತು. ಈ ಮೂರು ಮತಗಟ್ಟೆಗಳಲ್ಲಿ ಶೇ 75ಕ್ಕೂ ಹೆಚ್ಚು ಮತದಾನ ನಡೆದಿತ್ತು ಎಂದು ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಖಾದಿರ್ ರಾಣಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪಂಕಜ್ ಅಗರ್ವಾಲ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
‘ಮಾಧ್ಯಮಗಳನ್ನೇ ಖರೀದಿಸಿದ ಪಕ್ಷಗಳು’
ಕೋಲ್ಕತ್ತ (ಪಿಟಿಐ): ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಶ್ರೀಮಂತ ರಾಜಕೀಯ ಪಕ್ಷಗಳು ಕೆಲವು ಮಾಧ್ಯಮಗಳನ್ನು ನಿಯಂತ್ರಣಕ್ಕೆ ಪಡೆದಿವೆ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಆಪಾದಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿದ್ದವು. ಆದರೆ ಕೆಲವು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಏಕಮುಖ ಮತ್ತು ಪಕ್ಷಪಾತಿ ಧೋರಣೆ ಅನುಸರಿಸಿದ್ದು ತಮಗೆ ಆಘಾತ ತಂದಿದೆ ಎಂದು ಫೇಸ್ಬುಕ್ನಲ್ಲಿ ಹೇಳಿದ್ದಾರೆ.
₨ 313 ಕೋಟಿ ಹಣ ಜಪ್ತಿ
ನವದೆಹಲಿ (ಪಿಟಿಐ): ಸಾರ್ವತ್ರಿಕ ಚುನಾವಣೆ ಘೋಷಣೆಯಾದಾಗಿನಿಂದ ಎರಡು ತಿಂಗಳ ಅವಧಿಯಲ್ಲಿ ಸುಮಾರು ₨313 ಕೋಟಿ ಅಕ್ರಮ ಹಣವನ್ನು ದೇಶದ ವಿವಿಧ ಭಾಗದಲ್ಲಿ ಚುನಾವಣಾ ಆಯೋಗ ಜಪ್ತಿ ಮಾಡಿದೆ.
ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಅಕ್ರಮ ಹಣ ಮತ್ತು ಮದ್ಯ ಪತ್ತೆಯಾಗಿದೆ. ಚುನಾವಣಾ ಆಯೋಗ ನೇಮಕ ಮಾಡಿರುವ ಕಣ್ಗಾವಲು ಮತ್ತು ಸಂಚಾರಿ ದಳಗಳು ಇಷ್ಟೊಂದು ಹಣ ಮತ್ತು ಮದ್ಯವನ್ನು ವಶಪಡಿಸಿಕೊಂಡಿವೆ.
ಆಂಧ್ರದಲ್ಲಿ ₨153 ಕೋಟಿ ವಶಕ್ಕೆ ಪಡೆದಿದ್ದರೆ ಕರ್ನಾಟಕದಲ್ಲಿ ₨28 ಕೋಟಿ, ಮಹಾರಾಷ್ಟ್ರದಲ್ಲಿ ₨ 25.67 ಕೋಟಿ ಮತ್ತು ತಮಿಳುನಾಡಿನಲ್ಲಿ ₨25.05 ಕೋಟಿ ವಶಕ್ಕೆ ಪಡೆಯಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಸೂಚನೆ
ಮುಂಬೈ (ಪಿಟಿಐ): ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕೆಂದು ಬಾಂಬೆ ಹೈಕೋರ್ಟ್ ಸೋಮವಾರ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ತಡೆ ನೀಡಲು ನಿರಾಕರಿಸಿದೆ.
ಮುಂಬೈ ಮತ್ತು ಪುಣೆಯಲ್ಲಿ ಮತದಾರರ ಪಟ್ಟಿಯಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ತೆಗೆದು ಹಾಕಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಒಕಾ ಮತ್ತು ಎಂ.ಎಸ್. ಸೋನಕ್ ಮೇಲಿನಂತೆ ಆದೇಶ ನೀಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗೆ ಮೂರು ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವಂತೆ ಇದೆ ವೇಳೆ ಸರ್ಕಾರಕ್ಕೆ ಕೋರ್ಟ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.