ನವದೆಹಲಿ: ಛತ್ತೀಸಗಡದ ನಕ್ಸ್ಲ್ಪೀಡಿತ ಬಸ್ತರ್ ಪ್ರದೇಶದ ಜನರು ಈ ಚುನಾವಣೆಯಲ್ಲಿ ಹೊಸದಾಗಿ ಪರಿಚಯಿಸಲಾಗಿರುವ
‘ಯಾರಿಗೂ ಮತವಿಲ್ಲ’ ಎಂಬ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶವನ್ನು ಉತ್ಸಾಹದಿಂದ ಬಳಸಿಕೊಂಡಿದ್ದಾರೆ.
ಈ ಅವಕಾಶವನ್ನು ದೆಹಲಿಯ ಮತದಾರರು ಕನಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ.ಛತ್ತೀಸಗಡದಲ್ಲಿ ಮತದಾನ ಮಾಡಿರುವವರಲ್ಲಿ ಶೇ 3.07 ರಷ್ಟು ಜನರು ಯಾರಿಗೂ ಮತ ನೀಡದಿರುವ ಅವಕಾಶ ಬಳಸಿಕೊಂಡಿದ್ದರೆ ದೆಹಲಿಯಲ್ಲಿ ಶೇ 0.63ರಷ್ಟು ಮತದಾರರು ಮಾತ್ರ ಈ ಗುಂಡಿ ಒತ್ತಿದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿಯಂತಹ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಂದ ಬೇಸತ್ತಿದ್ದ ಜನರಿಗೆ ದೆಹಲಿಯಲ್ಲಿ ಪರ್ಯಾಯ ಆಯ್ಕೆಯಾಗಿ ಆಮ್ ಆದ್ಮಿ ಪಕ್ಷ ದೊರಕಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿಯೂ ಯಾರಿಗೂ ಮತ ಹಾಕದ ಆಯ್ಕೆ ಆಯ್ದುಕೊಂಡವರ ಪ್ರಮಾಣ ದೆಹಲಿಗಿಂತ ಹೆಚ್ಚಾಗಿದೆ. ಈ ರಾಜ್ಯಗಳಲ್ಲಿ ಮತ ಚಲಾಯಿಸಿದ ಮತದಾರರ ಪೈಕಿ ಕ್ರಮವಾಗಿ ಶೇ 1.92 ಮತ್ತು ಶೇ. 1.9 ರಷ್ಟು ಮತದಾರರು ಈ ಆಯ್ಕೆ ಬಳಸಿಕೊಂಡಿದ್ದಾರೆ.
ಸೆಪ್ಟೆಂಬರ್ 27ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಅನುಗುಣವಾಗಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೂ ಮತ ಇಲ್ಲ ಎಂಬ ಆಯ್ಕೆಯನ್ನು ಚುನಾವಣಾ ಆಯೋಗ ಮತಯಂತ್ರದಲ್ಲಿ ಮೊದಲ ಬಾರಿಗೆ ಅಳವಡಿಸಿತ್ತು.
ಛತ್ತೀಸಗಡದ, ಅದರಲ್ಲೂ ವಿಶೇಷವಾಗಿ ನಕ್ಸಲ್ ಪ್ರಾಬಲ್ಯದ ಬಸ್ತರ್ ಪ್ರದೇಶದ 12 ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈ ಅವಕಾಶ ಬಳಸಿಕೊಂಡಿದ್ದಾರೆ.
ಬಸ್ತರ್ ಜಿಲ್ಲೆಯ ಚಿತ್ರಕೂಟ್ ಕ್ಷೇತ್ರದಲ್ಲಿ 10,848 ಮತದಾರರು ಕಣದಲ್ಲಿದ್ದ ಎಲ್ಲ ಆರು ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ. ಹಾಗೆಯೇ ದಾಂತೇವಾಡದಲ್ಲಿ 9,677, ಕೇಶ್ಕಲ್ನಲ್ಲಿ 8,381,ಬಿಜಾಪುರದಲ್ಲಿ 7,179 ಮತ್ತು ನಾರಾಯಣಪುರದಲ್ಲಿ 6,731ಮತದಾರರು ಕಣದಲ್ಲಿದ್ದ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.
ತಮ್ಮ ಪ್ರಾಬಲ್ಯದ ಪ್ರದೇಶಗಳಲ್ಲಿ ಹಿಂದೆಯೂ ಮತದಾನ ಬಹಿಷ್ಕರಿಸುವಂತೆ ನಕ್ಸಲರು ಕರೆ ನೀಡಿದ್ದರು. ಈ ಬಾರಿಯೂ ಅದು ಪುನರಾವರ್ತನೆಯಾಗಿದೆ.
ರಾಜಸ್ತಾನದಲ್ಲಿ ಚುನಾವಣೆ ನಡೆದ ಎಲ್ಲ 199 ಕ್ಷೇತ್ರಗಳ ಮತದಾರರು ಕೂಡ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶವನ್ನು ಬಳಸಿಕೊಂಡಿದ್ದಾರೆ. ಈ ಹಕ್ಕಿನ ಬಳಕೆಯ ಪ್ರಮಾಣ 349ರಿಂದ 7,244ರವರೆಗೆ ಇದೆ. 20 ಕ್ಷೇತ್ರಗಳ ಮತದಾರರು ಈ ಅವಕಾಶವನ್ನು ಬಳಸಿಕೊಂಡಿದ್ದು ಅದರಲ್ಲಿ16 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಕ್ಷೇತ್ರಗಳು ಸೇರಿವೆ. ಮಧ್ಯ ಪ್ರದೇಶದ ಭೋಪಾಲ್ ಉತ್ತರ ಕ್ಷೇತ್ರದಲ್ಲಿ 2,337 ಮತದಾರರು ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.
ದೆಹಲಿಯಲ್ಲಿ ಈ ಅವಕಾಶವನ್ನು ಬಳಸಿಕೊಂಡವರ ಸಂಖ್ಯೆ ಕೇವಲ 49,892 ಆಗಿದ್ದರೆ, ಮಧ್ಯ ಪ್ರದೇಶದಲ್ಲಿ 6,43,144 ಮತದಾರರು ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.
ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಮತಗಳನ್ನು ಸಿಂಧು ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಕಡಿಮೆ ಮತ ಗಳಿಸಿದ ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲು ಹಾಕುವ ಸಂದರ್ಭದಲ್ಲಿ ಈ ಮತಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಒಂದು ವೇಳೆ ಯಾರಿಗೂ ಮತ ಹಾಕದವರ ಸಂಖ್ಯೆಯೇ ಹೆಚ್ಚಾಗಿದ್ದರೆ, ನಂತರದ ಸ್ಥಾನದಲ್ಲಿರುವ ಗರಿಷ್ಠ ಮತ ಪಡೆದವರನ್ನು ವಿಜಯಿಗಳಾಗಿ ಘೋಷಿಸಲಾಗುವುದು ಎಂದೂ ಆಯೋಗ ಹೇಳಿತ್ತು.
ಇಲ್ಲಿ ಕ್ರಿಮಿನಲ್ ಆರೋಪಿ ಶಾಸಕರು ಕಡಿಮೆ
ನವದೆಹಲಿ (ಪಿಟಿಐ): ವಿಧಾನಸಭಾ ಚುನಾವಣೆ ಎದುರಿಸಿದ ನಾಲ್ಕು ಪ್ರಮುಖ ರಾಜ್ಯಗಳ ಪೈಕಿ ಛತ್ತೀಸಗಡದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕ್ರಿಮಿನಲ್ ಆರೋಪಿಗಳು ಶಾಸಕರಾಗಿ ಆಯ್ಕೆಯಾಗಿದ್ದರೆ, ದೆಹಲಿಯಲ್ಲಿ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ.
ಚುನಾವಣೆಗೆ ಸ್ಪರ್ಧಿಸಿದ್ದವರು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ್ದ ಪ್ರಮಾಣಪತ್ರವನ್ನು ಆಧರಿಸಿ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್್ಸ’ ಎಂಬ ಸಂಸ್ಥೆ ವಿವಿಧ ರಾಜ್ಯಗಳಲ್ಲಿ ಹೊಸದಾಗಿ ಆಯ್ಕೆಯಾಗಿರುವ ಕ್ರಿಮಿನಲ್ ಶಾಸಕರ ಪ್ರಮಾಣವನ್ನು ಲೆಕ್ಕ ಹಾಕಿದೆ. ಆ ಪ್ರಕಾರ ನಾಲ್ಕು ರಾಜ್ಯಗಳಲ್ಲಿನ ಕ್ರಿಮಿನಲ್ ಆರೋಪಿ ಶಾಸಕರ ಪ್ರಮಾಣ ಹೀಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.