ಚಿತ್ರದುರ್ಗ: ತುಮಕೂರಿನಿಂದ ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆಗೆ ನೇರ ರೈಲು ಮಾರ್ಗ ಕಲ್ಪಿಸುವ ಕಾಮಗಾರಿಗೆ 2013ರ ಜನವರಿ ಮೂರನೇ ವಾರದಲ್ಲಿ ಶಂಕುಸ್ಥಾಪನೆ ನೆರವೇರಿಸಲು ರಾಜ್ಯ ರೈಲ್ವೆ ಖಾತೆ ಸಚಿವ ಕೆ.ಜೆ. ಸೂರ್ಯಪ್ರಕಾಶ್ರೆಡ್ಡಿ ಅವರು ಒಪ್ಪಿದ್ದಾರೆ ಎಂದು ಸಂಸತ್ ಸದಸ್ಯರಾದ ಜನಾರ್ದನಸ್ವಾಮಿ ತಿಳಿಸಿದ್ದಾರೆ.
ಬುಧವಾರ ನವದೆಹಲಿಯಲ್ಲಿ ತುಮಕೂರು ಸಂಸತ್ ಸದಸ್ಯರಾದ ಬಸವರಾಜು ಅವರೊಂದಿಗೆ ಸಚಿವರನ್ನು ಭೇಟಿ ಮಾಡಿ ಕಾಮಗಾರಿ ಆರಂಭಿಸಲು ಶಂಕುಸ್ಥಾಪನೆ ನೆರವೇರಿಸಲು ಮನವಿ ಮಾಡಲಾಗಿದೆ. ಸಚಿವರು ಸಹ ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ತುಮಕೂರು, ಚಿತ್ರದುರ್ಗ ದಾವಣಗೆರೆ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಹಲವಾರು ಹಂತಗಳನ್ನು ತಲುಪಿದೆ. ಸರ್ಕಾರ ಯೋಜನೆಯನ್ನು ಆಯವ್ಯಯದಲ್ಲಿ ಸೇರಿಸಿ ಯೋಜನಾ ಆಯೋಗದ ಅನುಮೋದನೆ ಪಡೆದು ಸಚಿವ ಸಂಪುಟದ ಅನುಮೋದನೆ ಪಡೆದು ಸಮೀಕ್ಷೆ ಕಾರ್ಯಕ್ಕೆ ರೂ ಕೋಟಿ ಹಣ ಬಿಡುಗಡೆಯಾಗಿ ಈಗಾಗಲೇ ಅಂತಿಮ `ಲೊಕೇಷನ್' ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.