ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹೈನುಗಾರಿಕೆಯಲ್ಲಿ ತೊಡಗಿರುವವರ ಮಕ್ಕಳ ವಿದ್ಯಾಭ್ಯಾಸಕ್ಕೆಂದು 2175 ವಿದ್ಯಾರ್ಥಿಗಳಿಗೆ 26.10 ಲಕ್ಷ ರೂ. ವಿದಾರ್ಥಿ ವೇತನ ನೀಡಲಿದೆ ಎಂದು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್ ತಿಳಿಸಿದರು.
ತಾಲ್ಲೂಕಿನ ಬಮೂಲ್ ಕಚೇರಿಯಲ್ಲಿ ನಡೆದ ಜನಶ್ರೀ ಭಿಮಾ ವಿಮಾ ಯೋಜನೆಯಡಿ ವಿದ್ಯಾರ್ಥಿ ವೇತನ ಮಂಜೂರಾತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಯೋಜನೆಯ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗೂ 1200 ರೂ. ವಿದ್ಯಾರ್ಥಿ ವೇತನ ದೊರೆಯಲಿದೆ ಎಂದರು.
ಹಾಲು ಉತ್ಪಾದನೆಯೇ ಜೀವನಾಧಾರವಾಗಿರುವ ತಾಲ್ಲೂಕಿನ 14,500 ಮಂದಿಯನ್ನು ಜನಶ್ರೀ ಭಿಮಾ ಯೋಜನೆಯಡಿ ಗುಂಪು ವಿಮಾ ಯೋಜನೆಗೆ ಒಳಪಡಿಸಲಾಗಿದೆ. ಕೇಂದ್ರ ಸರಕಾರದ ಈ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿರುವ ಚನ್ನಪಟ್ಟಣ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ 50 ಸಾವಿರಕ್ಕೆ ತಲುಪುವ ಗುರಿ ಹೊಂದಿ ಎಂದು ವಿವರಿಸಿದರು.
ಸದಸ್ಯರ ಮಕ್ಕಳಿಗೆ 9ನೇ ತರಗತಿಯಿಂದ ಪಿಯುಸಿವರೆಗೆ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ವೇತನ ದೊರೆಯಲಿದೆ. ಈಗಾಗಲೇ 7.50 ಲಕ್ಷ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದರು.
ಯೋಜನೆ ವ್ಯಾಪ್ತಿಗೊಳಪಟ್ಟಿರುವ ಫಲಾನುಭವಿಗಳು ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿ ಮೂಲಕ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆಯಬಹುದು ಎಂದು ಲಿಂಗೇಶ್ಕುಮಾರ್ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಮಲ್ಲಿಕಾರ್ಜುನಗೌಡ, ಸದಸ್ಯರಾದ ರಘು ಕುಮಾರ್,ನಾಗೇಶ್ವರಿ, ರಮೇಶ್, ನಗರ ಸಭಾಸದಸ್ಯರುಗಳಾದ ವಾಸೀಲ್ ಆಲಿಖಾನ್, ರಾಜು, ಜೆಡಿಎಸ್ ಮುಖಂಡ ಫರೀದ್ ಖಾನ್ ಘೋರಿ, ಶಿಬಿರದ ಉಪ ವ್ಯವಸ್ಥಾಪಕ ನಾಗರಾಜಯ್ಯ, ಡಾ.ಶ್ರೀಧರ್, ವಿಸ್ತರಣಾಧಿಕಾರಿಗಳಾದ ಶಿವ ಪ್ರಸನ್ನ, ಮಹದೇವೇಗೌಡ ಇತರರು ಹಾಜರಿದ್ದರು.