ಬಾಗಲಕೋಟೆ: ಜನೋಪಕಾರಿ ಕೆಲಸವನ್ನು ಮಾಡುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಮಾಜಿ ಗವರ್ನರ್ ಮಹೇಶ ರಾಯ್ಕರ ಹೇಳಿದರು.
ಬಾಗಲಕೋಟೆ ಮತ್ತು ವಿಜಾಪುರ ರೋಟರಿ ಕ್ಲಬ್ ಪದಾಧಿಕಾರಿಗಳಿಗೆ ನಗರದ ಅನುಗ್ರಹ ಸಭಾಭವನದಲ್ಲಿ ವೃತ್ತಿ ಸೇವೆ ವಿಷಯದ ಕುರಿತು ಏರ್ಪಡಿಸಿದ್ದ ವಲಯಮಟ್ಟದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇವರಿಗೆ ಲಂಚಕೊಟ್ಟರೆ ನಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ. ಜನರಿಗೆ ಒಳ್ಳೆಯದಾಗುವಂತಹ ಕೆಲಸವನ್ನು ಮಾಡಿದರೆ ದೇವರು ಆಶೀರ್ವಾದ ಮಾಡಲಿದ್ದಾನೆ ಎಂದರು.
ರೋಟರಿ ಸಂಸ್ಥೆಗೆ ಘನತೆ ಬರಬೇಕಾದರೆ ಕಾರ್ಯಶೀಲರಾಗಿ ಕೆಲಸ ಮಾಡಬೇಕು. ಜನತೆಯ ಕಷ್ಟವನ್ನು ಅರಿತುಕೊಂಡು ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ ಎಂದರು.
ಯಾವುದೇ ಕಾರ್ಯವನ್ನು ಕೈಗೊಂಡರೆ ಅದು ಸದ್ಬಳಕೆಯಾಗುವ ರೀತಿಯಲ್ಲಿರಬೇಕು. ಕೇವಲ ಕನಸಾಗಿ ಉಳಿಯಬಾರದು ಎಂದು ರೋಟರಿ ಕ್ಲಬ್ ಸದಸ್ಯರಿಗೆ ಸಲಹೆ ನೀಡಿದರು.
ಬಾಗಲಕೋಟೆ ರೋಟರಿ ಕ್ಲಬ್ ಅಧ್ಯಕ್ಷ ದೇವದಾಸ ಮಾತನಾಡಿ, ಅವಳಿ ಜಿಲ್ಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ನಿರುದ್ಯೋಗಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಶೀಘ್ರದಲ್ಲೇ ವೃತ್ತಿಕೌಶಲ ಕುರಿತು ತರಬೇತಿ ನೀಡಲಾಗುವುದು ಎಂದರು.
ಗ್ರಾಮೀಣ ಪ್ರದೇಶದಲ್ಲಿರುವ ಬಡವರಿಗೆ ಅನುಕೂಲವಾಗುವಂತಹ ಹಾಗೂ ಆರ್ಥಿಕವಾಗಿ ಸಬಲರಾಜಾಗುವಂತಹ ಕಾರ್ಯಕ್ರಮ ರೋಟರಿ ಕ್ಲಬ್ ಜಾರಿಗೆ ತರಲಿದೆ ಎಂದರು.
ರವಿ ಶಿಲ್ಲೇದಾರ, ಜಿ.ವಿ.ದಾನಶೆಟ್ಟಿ, ಡಾ.ಪಂಚಮುಖಿ, ವೀರಣ್ಣ ಕಿರಗಿ, ಸುದೀಂದ್ರ ಪವಾರ, ಅಶೋಕ ನಾಯಕ, ಸಚಿನ್ ಸೇಡಂಕರ, ಶ್ರಿಧರ ದಾಸ, ಹೆರಕಲ್, ಪಿ.ಎಸ್.ಹುುಲ ಗೋಳ, ಎಮ್.ಎನ್.ಪುರಾಣಿಕ, ಪರಶುರಾಮ ಮುಳಗುಂದ, ಡಾ.ಗಿರೀಶ ಮಾಸೂರಕರ, ಯಲ್ಲಪ್ಪ ಜಕಾತಿ ಸೇರಿದಂತೆ ಬಾಗಲಕೋಟೆ ಮತ್ತು ವಿಜಾಪುರ ರೋಟರಿ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.