ಬೆಂಗಳೂರು: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸಂಸತ್ತು 1994ರಲ್ಲಿ ಸರ್ವಾನುಮತದಿಂದ ಕೈಗೊಂಡಿದ್ದ ನಿರ್ಣಯವನ್ನು ಅನುಷ್ಠಾನಕ್ಕೆ ತರಬೇಕು ಎಂದು `ಪ್ರಜಾಪ್ರಭುತ್ವಕ್ಕಾಗಿ ನಾಗರಿಕರು~ ಸಂಘಟನೆ ಬುಧವಾರ ಮೋಂಬತ್ತಿ ಬೆಳಗಿಸುವ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದೆ.
ಇಲ್ಲಿನ ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಈ ಕಾರ್ಯಕ್ರಮ ನಡೆಯಲಿದೆ.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಾಕಿಸ್ತಾನ ಮತ್ತು ಚೀನಾ ದೇಶಗಳು ಕಾಶ್ಮೀರದ ಕೆಲವು ಪ್ರದೇಶಗಳನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡಿವೆ.
ಆ ಪ್ರದೇಶಗಳನ್ನು ಅವು ಭಾರತಕ್ಕೆ ಬಿಟ್ಟುಕೊಡಬೇಕು ಎಂದು ದೇಶದ ಸಂಸತ್ತು 1994ರ ಫೆಬ್ರುವರಿ 22ರಂದು ನಿರ್ಣಯ ಕೈಗೊಂಡಿತ್ತು. ಆದರೆ ನಿರ್ಣಯದ ಯಾವ ಅಂಶಗಳೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಂಘಟನೆ ಹೇಳಿದೆ.
ಭಯೋತ್ಪಾದನೆಯ ಕಾರಣ ನಿರಾಶ್ರಿತರಾದ ಜಮ್ಮು ಮತ್ತು ಕಾಶ್ಮೀರದ ಐದು ಲಕ್ಷ ನಾಗರಿಕರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕು. ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ, ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ.