ಮಹನೀಯರ, ದಾರ್ಶನಿಕರ, ಸಾಧಕರ ಜಯಂತಿಗಳನ್ನು ನಾವು ಎಲ್ಲೆಡೆಯೂ ಗೌರವಾದರಗಳೊಂದಿಗೆ ಆಚರಿಸುತ್ತೇವೆ. ಜಯಂತಿಗಳಂದು ಆಯಾ ಮಹನೀಯರ ತತ್ವಾದರ್ಶಗಳು, ಸಮಾಜಕ್ಕೆ ನೀಡಿರುವ ಬಳುವಳಿಗಳು, ಅವರಲ್ಲಿನ ಜೀವನ ಮೌಲ್ಯಗಳನ್ನು ಸ್ಮರಿಸಿ, ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುವುದು ಎಲ್ಲರ ಜವಾಬ್ದಾರಿ.
ಆದರೆ, ಇತ್ತೀಚೆಗೆ ನಾವು ಆಚರಿಸುತ್ತಿರುವ, ಘೋಷಿಸುತ್ತಿರುವ ಜಯಂತಿ ಕಾರ್ಯಕ್ರಮಗಳು ನಿರ್ದಿಷ್ಟ ಸಮುದಾಯಗಳ ಓಲೈಕೆಗೇನೋ ಎಂಬಂತೆ ಭಾಸವಾಗುತ್ತಿರುವುದು ಸುಳ್ಳಲ್ಲ. ರಜೆ ಘೋಷಿಸಿದ ಮಾತ್ರಕ್ಕೆ ಜಯಂತಿ ಪರಿಪೂರ್ಣವಾಗುತ್ತದೆ ಎಂಬ ಭಾವ ಜನರಲ್ಲಿ ಬೆಳೆಯುತ್ತಿರುವುದು ದುರದೃಷ್ಟಕರ. ಸರ್ಕಾರ ಈ ವಿಷಯಗಳಲ್ಲಿ ವಿವೇಕದ ಹೆಜ್ಜೆ ಇಡುವುದು ಸೂಕ್ತ.
ಮುಂದಿನ ದಿನಗಳಲ್ಲಾದರೂ ರಜೆ ರದ್ದುಪಡಿಸುವ ಬಗ್ಗೆ ಹಾಗೂ ಕ್ಯಾಲೆಂಡರ್ಗಳಲ್ಲಿ ಜಯಂತಿ ದಿನಾಂಕಗಳು ಕೆಂಪು ಶಾಯಿಯ ಬದಲು ಸಮೃದ್ಧಿ, ಉತ್ಸಾಹವನ್ನು ಇಮ್ಮಡಿಗೊಳಿಸುವ ಸಂಕೇತ ಸೂಚಕ ‘ಹಸಿರು’ ಶಾಯಿಯಲ್ಲಿ ನಮೂದಾಗುವಂತೆ ಸಂಬಂಧಪಟ್ಟವರು ಚಿಂತಿಸಿ ಕ್ರಮಕೈಗೊಳ್ಳಲಿ. ಕಚೇರಿಗಳು, ಬ್ಯಾಂಕ್ಗಳು, ಶಾಲೆಗಳಲ್ಲಿ ಜಯಂತಿ, ಆಚರಣೆಗಳು ಬೆಳಗಿನ ಒಂದೆರಡು ತಾಸು ಅವಧಿಯಲ್ಲಿ ಎಲ್ಲರ ಭಾಗವಹಿಸುವಿಕೆಯಿಂದ ಸಡಗರದಿಂದ ಜರಗುವಂತಾಗಲಿ. ನಂತರ, ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ದೈನಂದಿನ ಕಾರ್ಯಕಲಾಪ, ಕಡತ ವಿಲೇವಾರಿ...‘ದ್ವಿಗುಣ ಸಾಮರ್ಥ್ಯ’ದಲ್ಲಿ ಸಾಗಿ ಜಯಂತಿಗಳು ಅರ್ಥಪೂರ್ಣವಾಗಲಿ.