ನವದೆಹಲಿ (ಐಎಎನ್ಎಸ್): ಭಾರತದಲ್ಲಿ ಜಾತಿ ಆಧಾರದ ಮೇಲೆ ಮಾಡಲಾಗುತ್ತಿರುವ ತಾರತಮ್ಯ ಧೋರಣೆಯನ್ನು ಕಟುವಾಗಿ ಟೀಕಿಸಿರುವ ಯೂರೋಪಿನ ಸಂಸತ್ತು, ಈ ಸಂಬಂಧ ನಿರ್ಣಯವೊಂದನ್ನು ಇತ್ತೀಚೆಗೆ ಅಂಗೀಕರಿಸಿದೆ.
ನಿರ್ಬಂಧದ ನಡುವೆಯೂ ಒಳಚರಂಡಿ ಸ್ವಚ್ಛಗೊಳಿಸಲು ಭಾರತದಲ್ಲಿ ಪೌರ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇದು ಅಮಾನವೀಯ ಎಂದು ಅದು ಕಳವಳ ವ್ಯಕ್ತಪಡಿಸಿದೆ. ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಇಂಟರ್ನ್ಯಾಷನಲ್ ದಲಿತ್ ಸಾಲಿಡಾರಿಟಿ ನೆಟ್ವರ್ಕ್ (ಐಡಿಎಸ್ಎನ್) ಈ ಮಾಹಿತಿ ನೀಡಿದ್ದು, ಭಾರತ ಹಾಗೂ ಕಾಂಗೊಗಳಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ಯೂರೋಪ್ ಸಂಸತ್ತಿನ ನಿರ್ಣಯದಲ್ಲಿ ಉಲ್ಲೇಖವಿದೆ ಎಂದು ತಿಳಿಸಿದೆ.
ಭಾರತದ ಜಾತಿ ತಾರತಮ್ಯತೆ ಹೋಗಲಾಡಿಸಲು ಅರ್ಥಪೂರ್ಣ ಕೆಲಸ ಕೈಗೊಳ್ಳಬೇಕಾಗಿದೆ. ಇತ್ತೀಚೆಗೆ ಹರಿಯಾಣ ಹಾಗೂ ತಮಿಳುನಾಡುಗಳಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯದಿಂದಾಗಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಮನೆಮಠ ಬಿಟ್ಟು ತೆರಳಿರುವ ಕುರಿತೂ ಸಹ ನಿರ್ಣಯದಲ್ಲಿ ವಿಷಾದ ವ್ಯಕ್ತಪಡಿಸಲಾಗಿದೆ.