ಹಾವೇರಿ: ‘ಜನಸಾಮಾನ್ಯರ, ನೊಂದವರ, ಸಾಮಾಜಿಕ ಸ್ಥರದಲ್ಲಿ ಕೊನೆಯಲ್ಲಿರುವವರ ಧ್ವನಿಯಾಗಿ ಜಾನಪದ ವಿಶ್ವವಿದ್ಯಾಲಯ ನಿಲ್ಲಬೇಕು. ಆ ನಿಟ್ಟಿನಲ್ಲಿ ಅದನ್ನು ಕಟ್ಟಿ ಜಾಗತಿಕ ಮಟ್ಟದಲ್ಲಿ ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ’ ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಗೋ.ರು. ಚನ್ನಬಸಪ್ಪ ಹೇಳಿದರು.
ಜಿಲ್ಲೆಯ ಶಿಗ್ಗಾಂವ ಪಟ್ಟಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ಗಂಗಮ್ಮ ಬೊಮ್ಮಾಯಿ ಟ್ರಸ್ಟ್, ಜಾನಪದ ಸಂಭ್ರಮ ಸಮಿತಿ ಇವುಗಳ ಆಶ್ರಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಬದುಕು ನಡೆಸದಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಎಲ್ಲೆಡೆ ತಲ್ಲಣ, ಗೊಂದಲ, ಭಯದ ವಾತಾವರಣವಿದೆ. ಪರಸ್ಪರ ವಿಶ್ವಾಸವಿಲ್ಲದೇ ದುರ್ಬಲವಾದ ಸನ್ನಿವೇಶದಲ್ಲಿ ನಾವಿದ್ದೇವೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದ್ದು, ಇವುಗಳೆಲ್ಲವುಗಳಿಗೆ ಜಾನಪದ ವಿ.ವಿ. ಉತ್ತರವಾಗಬೇಕಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ ಸಾಹಿತ್ಯ, ಸಂಸ್ಕೃತಿಗೆ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಜಾನಪದ ವಿ.ವಿ. ಕಾರ್ಯಗಳು ಇನ್ನು ಆರಂಭವಾಗಿಲ್ಲ. ಅದಕ್ಕೆ ಸರ್ಕಾರ ಮಟ್ಟದಲ್ಲಿ ಶಾಸನ ಅಂಗೀಕಾರವಾಗಬೇಕು. ಅಂದಾಗ ಮಾತ್ರ ಅದರ ಕೆಲಸಗಳು ಆರಂಭವಾಗುತ್ತವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರಾದ ಉದಾಸಿ ಹಾಗೂ ಬಸವರಾಜ ಬೊಮ್ಮಾಯಿ ಪ್ರಯತ್ನಿಸಬೇಕು. ಆದಷ್ಟು ಬೇಗನೆ ಜಾನಪದ ವಿ.ವಿ.ಯ ಕೆಲಸಗಳು ಆರಂಭವಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿದ್ದರು.