ನವದೆಹಲಿ (ಐಎಎನ್ಎಸ್): ಮಾಜಿ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹರಿಯಾಣಾದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡಾ ಅವರು ನಿರೀಕ್ಷಣಾ ಜಾಮೀನಿಗಾಗಿ ಸೋಮವಾರ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
`ಗೀತಿಕಾ ಒಬ್ಬ ಸೂಕ್ಷ್ಮ ಸ್ವಭಾವದ ಹುಡುಗಿ. ದುರ್ಬಲ ಮನಸ್ಸಿನವಳು. ಆಕೆ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಳು. ಪ್ರತಿ ವಿಚಾರದಲ್ಲೂ ಆಕೆ ಗೊಂದಲಕ್ಕೊಳಗಾಗುತ್ತಿದ್ದಳು~ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
`ಎಫ್ಐಆರ್ ಅಥವಾ ಆತ್ಮಹತ್ಯೆಗೆ ಮುನ್ನ ಬರೆದಿಟ್ಟ ಪತ್ರದಲ್ಲಿ ಎಲ್ಲೂ ಆತ್ಮಹತ್ಯೆಗೆ ನಾವೇ ಕಾರಣ ಎಂದು ಸೂಚಿಸುವ ಪುರಾವೆಗಳಿಲ್ಲ. ಆಕೆ ಸೂಕ್ಷ್ಮ ಮನಸ್ಸಿನವಳಾಗಿದ್ದರಿಂದ, ಆಕೆಯ ಸಾವಿಗೆ ಅವರ ಮನಸ್ಥಿತಿಯೇ ಕಾರಣ~ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಹಿರಿಯ ವಕೀಲರಾದ ಕೆ.ಟಿ.ಎಸ್. ತುಳಸಿ ಅವರು ಆರೋಪಿ ಗೋಯಲ್ ಪರ ಸೋಮವಾರ ಬೆಳಿಗ್ಗೆ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ವಿಪಿನ್ ಸಾಂಘ್ವಿ ಅವರನ್ನೊಳಗೊಂಡ ವಿಭಾಗೀಯು ಪೀಠದ ಮುಂದೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್ 9ರಂದು ಗೋಯಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷೆನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.