ಅಳ್ನಾವರ: ನಗರ ಹಾಗೂ ಪಟ್ಟಣಗಳ ಅಭಿವೃದ್ಧಿಗಾಗಿ ಕಳೆದ ಒಂದು ವರ್ಷದ ಹಿಂದೆ ಘೋಷಿಸಿದ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾಮಗಾರಿಗಳ ‘ನಗರೋತ್ಥಾನ ಯೋಜನೆ’ ಅನುಷ್ಠಾನದ ವಿಳಂಬದಿಂದ ಸಾಕಷ್ಟು ಕಾಮಗಾರಿಗಳು ಆರಂಭವಾಗದೆ ಅಭಿವೃದ್ಧಿ ಕುಂಠಿತಗೊಂಡಿದೆ.
ಮಲೆನಾಡಿನ ಸೆರಗಿನ ಈ ಪ್ರದೇಶದಲ್ಲಿ ಈ ಬಾರಿ ಸಾಕಷ್ಟು ಮಳೆ ಬಿದ್ದು ಪಟ್ಟಣದ ಎಲ್ಲಾ ರಸ್ತೆಗಳು ಹಾಳಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರಸ್ತೆ ಮಧ್ಯೆ ದೊಡ್ಡ ದೊಡ್ಡ ತೆಗ್ಗುಗಳು ಬಿದ್ದಿದ್ದು, ಜನರು ಪ್ರಯಾಸ ಮಾಡಿ ನಿಧಾನವಾಗಿ ಸಂಚರಿಸುವ ಅನಿವಾರ್ಯತೆ ಉಂಟಾಗಿದೆ.
ಚರಂಡಿ ಕೂಡಾ ದುರಸ್ತಿ ಕಾಣದೆ ಅಲ್ಲಲ್ಲಿ ಕೊಳಚೆ ಸಂಗ್ರಹಗೊಂಡು ದುರ್ವಾಸನೆ ಹರಡಿದೆ.
ಪಟ್ಟಣ ಹಾಗೂ ಶಹರ ಪ್ರದೇಶಗಳ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ರಸ್ತೆ ಹಾಗೂ ಚರಂಡಿ ದುರಸ್ತಿಗೆ ಹಿಂದಿನ ಸರಕಾರ ವಿಶೇಷ ಅನುದಾನದ ನಗರೋತ್ಥಾನ ಯೋಜನೆ ಜಾರಿಗೊಳಿಸಿತ್ತು. ಅದರಂತೆ ಇಲ್ಲಿನ ಪಟ್ಟಣ ಪಂಚಾಯಿತಿ ₨ 5 ಕೋಟಿ ಮೊತ್ತದ ಕ್ರಿಯಾ ಯೋಜನೆ ತಯಾರಿಸಿ ಸರಕಾರಕ್ಕೆ ಕಳುಹಿಸಿತ್ತು. ಈ ಪ್ರಸ್ತಾವ ಕಳುಹಿಸಿ ಸುಮಾರು ಒಂದು ವರ್ಷ ಗತಿಸುತ್ತಾ ಬಂದರೂ ಯೋಜನೆ ಮಾತ್ರ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.
ಧಾರವಾಡ ಜಿಲ್ಲೆಯ ಎಲ್ಲಾ ಪಟ್ಟಣ ಪಂಚಾಯಿತಿಗಳು ಈ ಯೋಜನೆಗೆ ಕ್ರಿಯಾ ಯೋಜನೆ ಸಲ್ಲಿಸಿವೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಈ ಯೋಜನೆ ಜಾರಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ತ್ವರಿತ ಗತಿ ಹಿಡಿದಿವೆ. ಆದರೆ ಧಾರವಾಡ ಜಿಲ್ಲೆಯಲ್ಲಿಯೇ ಈ ಯೋಜನೆಗೆ ತುಕ್ಕು ಹಿಡಿದಿರುವುದು ಯಾಕೆ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ.
ಈ ಯೋಜನೆಯಡಿ ಪಟ್ಟಣದ ಎಲ್ಲ ರಸ್ತೆ ಮತ್ತು ಚರಂಡಿ ದುರಸ್ತಿ ಹಾಗೂ ನಿರ್ಮಾಣ ಕಾರ್ಯದ ಯೋಜನೆ ಇದೆ. ನಗರೋತ್ಥಾನ ಯೋಜನೆಯಲ್ಲಿ ಸ್ಥಳೀಯ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ಸೇರಿಸಿದ್ದರಿಂದ ಬೇರೆ ಯೋಜನೆಯಲ್ಲಿ ಈ ಕಾಮಗಾರಿ ಕೈಗೊಳ್ಳಲು ಆಗದ ಅಸಹಾಯಕ ಸ್ಥಿತಿಯನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಎದುರಿಸುತ್ತಿದೆ.
ಜಿಲ್ಲಾಡಳಿತ ಈ ಯೋಜನೆಯತ್ತ ಗಮನ ಹರಿಸಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.
ಇಲ್ಲಿನ ಪಟ್ಟಣ ಪಂಚಾಯಿತಿ ಸದಸ್ಯರು ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಆದ್ದರಿಂದ ಅವರಿಗೂ ಜನರು ಒತ್ತಾಯ ಮಾಡಲು ಆಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಗುರುವಾರ ಧಾರವಾಡಕ್ಕೆ ಬರಲಿದ್ದು, ಪಟ್ಟಣ ಪಂಚಾಯಿತಿ ಸದಸ್ಯರ ನಿಯೋಗ ಅವರಿಗೆ ಮನವಿ ಸಲ್ಲಿಸಲಿದೆ. ನೂತನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಈ ಯೋಜನೆಯತ್ತ ಗಮನ ಹರಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವರೇ ಎಂಬುದನ್ನು ಕಾಯ್ದು ನೋಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.