ನವದೆಹಲಿ(ಪಿಟಿಐ): ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟಿ) ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳಿಂದ ಸಹಮತ ವ್ಯಕ್ತವಾದರೆ ಈ ಕುರಿತು ಸಂವಿಧಾನಕ್ಕೆ ತಿದ್ದುಪಡಿ ತರುವ ಸಂಗತಿಯನ್ನು 2013-14ರ ಬಜೆಟ್ ಭಾಷಣದಲ್ಲಿ ಸೇರಿಸುವುದಾಗಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ವಿವಿಧ ರಾಜ್ಯಗಳ ಹಣಕಾಸು ಸಚಿವರ ಜತೆ ಬುಧವಾರ ಬಜೆಟ್ ಪೂರ್ವ ಸಮಾಲೋಚನೆ ನಡೆಸಿದ ಅವರು, `ಜಿಎಸ್ಟಿ ಜಾರಿಯಿಂದ ರಾಜ್ಯಗಳಿಗೆ ಆದಾಯ ನಷ್ಟವಾಗುತ್ತದೆ ಎಂಬ ವಿಚಾರವನ್ನು ಈಗ ಬದಿಗಿಡಬೇಕಿದೆ' ಎಂದು ಹೇಳಿದ್ದಾಗಿ ತಿಳಿದುಬಂದಿದೆ.
`ಜಿಎಸ್ಟಿ'ಗೆ ಸಂಬಂಧಿಸಿದಂತೆ ಸಂವಿಧಾನ(ತಿದ್ದುಪಡಿ) ಮಸೂದೆಯೊಂದನ್ನು 2011ರಲ್ಲಿಯೇ ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಹಣಕಾಸು ವಿಚಾರಗಳ ಸ್ಥಾಯಿ ಸಮಿತಿ ಪರಿಶೀಲನೆಯಲ್ಲಿದೆ.
ಕೇಂದ್ರ ಮಾರಾಟ ತೆರಿಗೆ ಯಲ್ಲಿ ರಾಜ್ಯಗಳಿಗೆ ಬರಬೇಕಾದ ಪಾಲು ಕಡಿಮೆ ಆಗಿದೆ. ಹಾಗಾಗಿ ಹೆಚ್ಚು ತೆರಿಗೆ ಪರಿಹಾರ ಒದಗಿಸಬೇಕು ಎಂಬುದು ರಾಜ್ಯಗಳ ಮುಖ್ಯ ಬೇಡಿಕೆಯಾಗಿದೆ.`ಈ ಬಗ್ಗೆ ಚರ್ಚಿಸಬಹುದು. ಆದರೆ, ಬೇಡಿಕೆ ಈಡೇರಿಸುವ ವಿಚಾರವೇನಿದ್ದರೂ ಆರ್ಥಿಕ ಸ್ಥಿತಿಗತಿಯನ್ನು ಅವಲಂಬಿಸಿದೆ' ಎಂದು ಕೇಂದ್ರ ಸರ್ಕಾರ ಹೇಳಿದೆ.