ದಾವಣಗೆರೆ: ಗ್ರಾಮ ಪಂಚಾಯ್ತಿ ನೌಕರರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ವತಿಯಿಂದ ಜಿಲ್ಲಾ ಪಂಚಾಯ್ತಿ ಕಚೇರಿ ಮುಂದೆ ಮಂಗಳವಾರ ಧರಣಿ ನಡೆಯಿತು.ಪಂಚಾಯ್ತಿಗಳ ಬಿಲ್ಕಲೆಕ್ಟರ್ ಮತ್ತು ಗುಮಾಸ್ತರ ಹುದ್ದೆಗಳನ್ನು ಮೊದಲು ಕೌಶಲ ಹೊಂದಿದ ವರ್ಗದ ಅಡಿ ಗುರುತಿಸಲಾಗಿತ್ತು. ಆದರೆ, ಇದೀಗ ಅವರನ್ನು ಕೌಶಲರಹಿತರ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಬಡ್ತಿಯಲ್ಲಿ ಸದ್ಯದಲ್ಲಿರುವ ಜ್ಯೇಷ್ಠತಾಪಟ್ಟಿಯನ್ನು ಪರಿಗಣಿಸದೇ ಪರೀಕ್ಷೆ ನಡೆಸಿ ಅಂಕಗಳ ಆಧಾರದಲ್ಲಿ ಬಡ್ತಿ ನೀಡುವ ಆದೇಶ ಸರಿಯಲ್ಲ.
ನೌಕರರ ಸಂಬಳ ಅನುದಾನದಲ್ಲಿ ಶೇ. 40ರಷ್ಟು ಮೊತ್ತವನ್ನು ಪ್ರತ್ಯೇಕವಾಗಿ ನೀಡುವಂತೆ ಆಗ್ರಹಿಸಿದ್ದರೂ ಕಡೆಗಣಿಸಲಾಗಿದೆ. ಅನುದಾನ ಪ್ರಮಾಣವನ್ನು ` 9, 12 ಹಾಗೂ 15 ಲಕ್ಷದಂತೆ ಏರಿಸಬೇಕು ಎಂಬ ಹಣಕಾಸು ಆಯೋಗದ ಶಿಫಾರಸ್ಸನ್ನು ಪ್ರಸಕ್ತ ಬಜೆಟ್ನಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಭವಿಷ್ಯನಿಧಿ, ಜನಶ್ರೀ ವಿಮಾ ಯೋಜನೆ ಬಗ್ಗೆ ಆದೇಶಗಳು ಕಾಗದದಲ್ಲೇ ಉಳಿದಿವೆ. ಕಂಪ್ಯೂಟರ್ ಆಪರೇಟರ್ಗಳನ್ನು ಗುತ್ತಿಗೆ ಆಧಾರದಲ್ಲೇ ನೇಮಕ ಮಾಡಿ ಶೊಷಿಸಲಾಗುತ್ತಿದೆ ಎಂದು ದೂರಿದರು.
ನಗರದ ವಿಮಾನಮಟ್ಟಿಯಿಂದ ಜಿಲ್ಲಾ ಪಂಚಾಯ್ತಿ ಕಚೇರಿವರೆಗೆ ತೆರಳಿ ಅಲ್ಲಿ ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷ ಕೆ.ಜಿ. ಬಸವಲಿಂಗಪ್ಪ ಅವರಿಗೆ ಮನವಿ ಸಲ್ಲಿಸಿದರು. ಅಲ್ಲಿಂದ ಕಾರ್ಮಿಕ ಇಲಾಖೆಯ ಕಚೇರಿಗೆ ತೆರಳಿ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಲ್. ಭಟ್, ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ಭೈರೇಶ್, ಮಂಜುನಾಥ, ಪಾಂಡುರಂಗಯ್ಯ, ನರಸಿಂಹಪ್ಪ ಇತರರು ನೇತೃತ್ವ ವಹಿಸಿದ್ದರು.