ಕೆಜಿಎಫ್: ಸರ್ಕಾರಿ ಕಾರ್ಯಕ್ರಮದಲ್ಲಿ ತೆಲುಗಿನಲ್ಲಿ ಭಾಷಣ ಮಾಡುತ್ತಿದ್ದ ಜಿಲ್ಲಾ ಪಂಚಾಯತಿ ಸದಸ್ಯ ಆರ್.ನಾರಾಯಣರೆಡ್ಡಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಡ್ಡಿಯನ್ನುಂಟು ಮಾಡಿದ ಘಟನೆ ಇತ್ತೀಚೆಗೆ ಪಾರಾಂಡಹಳ್ಳಿಯಲ್ಲಿ ನಡೆದಿದೆ.
ಗ್ರಾಮದಲ್ಲಿ ಪಿಂಚಣಿ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿಕೊಂಡಿತ್ತು. ಸರ್ಕಾರದ ಹಲವಾರು ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಭಾಷಣ ಮಾಡಿದ ಪಾರಾಂಡಹಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಆರ್.ನಾರಾಯಣರೆಡ್ಡಿ ತೆಲುಗಿನಲ್ಲಿ ಮಾತನಾಡತೊಡಗಿದರು.
ಇದರಿಂದ ಕುಪಿತಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವೇದಿಕೆಗೆ ನುಗ್ಗಿ ಭಾಷಣ ನಿಲ್ಲಿಸುವಂತೆ ಆಗ್ರಹಿಸಿದರು. ಕರ್ನಾಟಕ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು. ಅಧಿಕಾರಿಗಳು ವೇದಿಕೆಯಲ್ಲಿ ಕುಳಿತಿದ್ದಾರೆ. ಅವರ ಮುಂದೆಯೇ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವುದು ಸರಿಯಲ್ಲ ಎಂದರು.
ಕೆಲವರಿಗೆ ಅರ್ಥವಾಗಲೆಂದು ತೆಲುಗಿನಲ್ಲಿ ಮಾತನಾಡುತ್ತಿದ್ದೇನೆ ಎಂದು ನಾರಾಯಣರೆಡ್ಡಿ ಸಮರ್ಥನೆ ನೀಡಲು ಯತ್ನಿದಾಗ, ನಮ್ಮ ಮನೆ ಭಾಷೆ ಕೂಡ ತೆಲುಗೇ. ಆದರೆ ನಾವು ಕನ್ನಡ ನಾಡಿನಲ್ಲಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಕಾರ್ಯಕರ್ತರು ವಾದಿಸಿದರು. ಆಗ ನಾರಾಯಣರೆಡ್ಡಿ ಕನ್ನಡದಲ್ಲಿ ಮಾತಾಡಿದರು.