ನೀನಾಸಂ ತಿರುಗಾಟ ತಂಡ ಇತ್ತೀಚೆಗೆ ಡಾ.ಎಚ್ಚೆನ್ ಕಲಾ ಕ್ಷೇತ್ರದಲ್ಲಿ ಬೆಂಗಳೂರು ಲಲಿತ ಕಲಾ ಪರಿಷತ್ ಸಹಯೋಗದಲ್ಲಿ `ಕಂತು~ ಮತ್ತು `ನಮ್ಮಳಗಿನ ಬಶೀರ್~ ನಾಟಕಗಳನ್ನು ಮನೋಜ್ಞವಾಗಿ ಪ್ರದರ್ಶಿಸಿತು.
ಸಾಹಿತಿ ವಿವೇಕ ಶಾನಭಾಗ ಅವರ ನೀಳ್ಗತೆ ಆಧರಿಸಿ ರೂಪಿಸಿದ ರಂಗಪ್ರಯೋಗ ಇದಾಗಿತ್ತು. ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಒಂದು ಪುಟ್ಟಹಳ್ಳಿ ಮಾವಿನೂರು. ಅಲ್ಲಿ ತುಂಬಿ ಹರಿಯುವ ನದಿಗೆ ಅಣೆಕಟ್ಟೆ ಕಟ್ಟಲಾಗುವುದೆಂಬ ಸುದ್ದಿ ಊರನ್ನು ಮುಳುಗಡೆ ಭೀತಿಗೆ ತಳ್ಳುತ್ತದೆ.
ಇದೇ ಸಮಯಕ್ಕೆ ಸಂಭವಿಸುವ ಸೂರ್ಯಗ್ರಹಣದ ಕರಿ ನೆರಳು ಸಹ ಗ್ರಾಮಸ್ಥರನ್ನು ಆವರಿಸಿಕೊಳ್ಳುತ್ತದೆ. ಈ ಎರಡೂ ಘಟನೆಗಳ ಮೂಲಕ ಸಾಂಪ್ರದಾಯಿಕ ಹಾಗೂ ಆಧುನಿಕ ಮನೋಭಾವಗಳ ಸಂಘರ್ಷವನ್ನು ಬಿಂಬಿಸುವ ಪ್ರಯತ್ನ ಈ ನಾಟಕದಲ್ಲಿ ನಡೆದಿದೆ. ನೀಳ್ಗತೆಯನ್ನು ನಾಟಕವಾಗಿಸುವಲ್ಲಿ ನಿರ್ದೇಶಕ ಚನ್ನಕೇಶವ ಅವರ ಪ್ರಯತ್ನ ಅಭಿನಂದನಾರ್ಹ.
ಮಲೆಯಾಳಂನ ಕಥೆಗಾರ ವೈಕಂ ಮಹಮದ್ ಬಶೀರ್ ಅವರ ಕಥೆ ಆಧರಿಸಿದ ಮತ್ತೊಂದು ನಾಟಕ `ನಮ್ಮಳಗಿನ ಬಶೀರ್~ ವಿನೂತನವಾಗಿ ಮೂಡಿಬಂದಿತು. ಅವರದೇ `ಅಮ್ಮ~, `ಟೈಗರ್ ಮತ್ತು ಗೋಡೆಗಳು~, `ವಿಶ್ವವಿಖ್ಯಾತವಾದ ಮೂಗು~, `ಪೂವನ್ ಫಳಮ್~, `ಸಂಧ್ಯಾಪ್ರಣಮಮ್~ ಕಥೆಗಳು ಇಲ್ಲಿ ನಾಟಕವಾಗಿ ಪ್ರಯೋಗ ಕಂಡಿದೆ.
ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರಿದ ಬಶೀರ್ ಅವರು ನಿಜವಾದ ಸ್ವಾತಂತ್ರ್ಯದ ಪರಿಕಲ್ಪನೆಯ ಸುರುಳಿಯನ್ನು ನಮ್ಮ ಮುಂದೆ ಬಿಚ್ಚಿಡುತ್ತಾರೆ. ಇಲ್ಲಿ ಜೈಲಿನ ಬಲಿಷ್ಠ ಗೋಡೆಗಳು ಮನುಷ್ಯ ಮನುಷ್ಯರ ನಡುವಿನ ಎಲ್ಲಾ ಬಗೆಯ ಕಂದರಗಳ ಪ್ರತೀಕವಾಗಿ ಕಾಣಿಸಿಕೊಳ್ಳುತ್ತವೆ.
ರಾಜೀವ್ ಕೃಷ್ಣನ್ ಅವರು ರಂಗಪ್ರಿಯರನ್ನು ತಲುಪುವಲ್ಲಿ ನಿರ್ದೇಶಕರಾಗಿ ಯಶಸ್ವಿಯಾಗಿದ್ದಾರೆ. ಎರಡೂ ನಾಟಕಗಳಲ್ಲಿ ಪ್ರತಿ ಪಾತ್ರಕ್ಕೂ ಜೀವತುಂಬುವಂತೆ ಅಭಿನಯಿಸಿದ ನೀನಾಸಂ ತಿರುಗಾಟ ತಂಡದ ಕಲಾವಿದರ ಪಾತ್ರವೂ ಇಲ್ಲಿ ಮುಖ್ಯವಾಗಿದೆ.